ಶುಕ್ರವಾರ, ಮಾರ್ಚ್ 29, 2013

ಓದು ಕಲಿತದ್ದು

ಇವತ್ತು ನನಗೆ ಅತ್ಯಂತ ಖುಶಿ ಕೊಡುವಂತಹ ದಿನ. ತುಂಬ ದಿನದಿಂದ ಹುಡುಕುತಿದ್ದ ಎ.ಆರ್ ಕೃಷ್ಣಶಾಸ್ತ್ರಿ’ಗಳ ’ವಚನ ಭಾರತ’ ಬೀದಿ ಬದಿಯ ಪುಸ್ತಕದಂಗಡಿಯಲ್ಲಿ ೫೦ರೂ’ಗೆ ಸಿಕ್ತು. ನಾನು ಐದನೇ ತರಗತಿಯಲ್ಲಿದ್ದಾಗ ಮೊದಲನೇ ಬಾರಿ ಓದಿ ಮುಗಿಸಿದ್ದ ಪುಸ್ತಕವದು. ಎಷ್ಟು ಬಾರಿ ಓದಿದರೂ ಕೂಡ ಮಹಾಭಾರತ ಹೊಸತೆಂಬಂತೆ ಕಣ್ಣೆದುರು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಅದರಲ್ಲಿರೋ ಶಬ್ದಗಳ ಎಫೆಕ್ಟು ಅಂಥದ್ದು. ಆದಿ ಪರ್ವದಿಂದ ಸ್ವರ್ಗಾರೋಹಣ ಪರ್ವದವರೆಗೂ ಒಂದೇ ಗುಕ್ಕಿಗೆ ಮುಗಿಸಬಹುದಾದ ೩೬೮ ಪುಟಗಳ ಈ ಪುಸ್ತಕವೇ ನನಗೆ ಕನ್ನಡ ಪುಸ್ತಕಗಳನ್ನು ಓದುವ ಕಿಚ್ಚು ಹಚ್ಚಿದ್ದು. ನಂತರ ನೆಚ್ಚಿನ ತೇಜಸ್ವಿಯಿಂದ ಮುಂದುವರೆದು ಪಿ.ಯು.ಸಿ’ಗೆ ಬರುವಷ್ಟರಲ್ಲಿ ಭೈರಪ್ಪ, ಕುವೆಂಪು, ಕಾರಂತ’ರ ಪುಸ್ತಕಗಳೆಲ್ಲವೂ ನನ್ನಿಂದ ಓದಿಸಿಕೊಂಡಿದ್ದವು. ಕಥೆ ಕಾದಂಬರಿ ಹುಚ್ಚು ಎಷ್ಟರ ಮಟ್ಟಿಗೆ ಹತ್ತಿತ್ತು ಅಂದರೆ ನನ್ನಪ್ಪ ಟೆಕ್ಸ್ಟ್ ಬುಕ್ ಓದುತ್ತೀಯೋ ಇಲ್ಲೋ ಅಂತ ಬಾಸುಂಡೆಗಳ ಸುರಿಮಳೆಗೈದಿದ್ದರು. ಆದರೂ ಕದ್ದು ಮುಚ್ಚಿ ಟೆಕ್ಸ್ಟ್ ಬುಕ್ ಒಳಗಡೆ ಕಾದಂಬರಿ ಅಡಗಿಸಿ ಇಟ್ಟುಕೊಂಡು ಓದುತ್ತಿದ್ದೆ. ಪಿ.ಯು.ಸಿ ರಿಜೆಲ್ಟ್ ಬಂದಾಗ ಬೇರೆಯವರೆಲ್ಲಾ ಪ್ರಪಂಚ ತಲೆ ಮೇಲೆ ಬಿದ್ದವರ ಥರ ಓಡಾಡ್ತಾ ಇದ್ದರೆ ನಾನು ತೇಜಸ್ವಿಯವರ ’ಅಣ್ಣನ ನೆನಪು’ ಪುಸ್ತಕವನ್ನು ಅಟ್ಟದ ಮೇಲೆ ಕುಳಿತು ಓದಿದ್ದೆ.
ಪಿ.ಯು.ಸಿ’ಯಿಂದ ದೊಡ್ಡ ಪಾಠ ಕಲಿತು ಹೀಗಾದರೆ ಉದ್ಧಾರ ಆಗಲ್ಲ ಅಂತ ನನಗೇ ಅನ್ನಿಸಿ ಸಾಹಿತ್ಯ ಓದುವ ಹುಚ್ಚನ್ನು ಎಲ್ಲರಿಗೂ ಆಶ್ಚರ್ಯವಾಗೋ ರೀತಿ ಬಿಟ್ಟು ಬಿಟ್ಟಿದ್ದೆ. ಆಮೇಲೆ ಬಿ.ಎಸ್ಸಿ ಅದಾದ ಮೇಲೆ ಎಮ್.ಬಿ,ಎ, ರಿಸೆಶನ್ನು, ಕೆಲಸ ಅಂತ ತಲೆ ಕೆಡಿಸಿಕೊಂಡು ಸಾಹಿತ್ಯ ಮರೆತೇ ಹೋಗಿತ್ತು. ಇಂತಹ ಸಂದರ್ಭದಲ್ಲಿ ಮತ್ತೆ ಓದುವ ಆಭ್ಯಾಸ ಅದೇ ’ವಚನ ಭಾರತ’ದಿಂದಲೇ ಶುರು ಮಾಡಬೇಕು ಅನ್ನುವ ಕೊರೆತ ಮನಸಿನಲ್ಲಿ ಇದ್ದೇ ಇತ್ತು. ಪುಸ್ತಕ ಮಳಿಗೆಗಳನ್ನೆಲ್ಲಾ ಜಾಲಾಡಿದ್ದರೂ ಈ ಪುಸ್ತಕ ಮಾತ್ರ ಸಿಕ್ಕಿರಲಿಲ್ಲ. ಅಂತದ್ದರಲ್ಲಿ ತಮ್ಮನೊಂದಿಗೆ ಸಂಜೆ ಹೊರಗಡೆ ಹೋದಾಗ ಬೀದಿ ಬದಿಯಲ್ಲಿ ಸಿಗಬೇಕೇ. ಸ್ವರ್ಗ ಸಿಕ್ಕಷ್ಟೇ ಸಂತೋಷವಾಗಿ ಒಳಗೊಳಗೇ ಮನಸ್ಸು ಕುಣಿದಾಡಿ ಗ್ಯಾಂಗ್ನಂ ಡಾನ್ಸ್ ಮಾಡಿತು.

ಕಾಮೆಂಟ್‌ಗಳಿಲ್ಲ: