ಬುಧವಾರ, ಏಪ್ರಿಲ್ 17, 2013

ನಾಯಿಗಳ ಕಚ್ಚಾಟ ನೋಡಿದಿರಾ???

ನಾಯಿಗಳ ಕಚ್ಚಾಟ ನೋಡಿದಿರಾ???
ಒಂದೆಡೆ ಬಾಂಬು ಬ್ಲಾಸ್ಟು
ಕೆಲವೊಂದು ಎಗರಾಡುತಿವೆ ಕೊಡಲು
ಕಹಾನೀಲಿ ಟ್ವಿಸ್ಟು
ಮತ್ತೊಂದು ಮಗದೊಂದಕ್ಕೆ ಹೇಳುತಿದೆ
ಗೆಟ್ಟು ಲಾಸ್ಟು

ಈ ನಾಯಿಗಳ ಹಾರಾಟ, ಚೀರಾಟ
ಪರಸ್ಪರ ಕೆಸರೆರೆಚಾಟ, ಇರಬೇಕು
ಇದೇ ಅವಕ್ಕೆ ಚಿನ್ನಾಟ
ಇವುಗಳ ಹುಟ್ಟಡಗಿಸಲು,
ಹಚಾ ತೊಲಗಾಚೆ ನಾಯಿಗಳಾ
ಎನ್ನಬೇಕಾದ ಮಾಧ್ಯಮಗಳೋ
ಅಬ್ಬಾ!! ಒಂದು ನಾಯಿಯ ಮೇಲೆ
ಮತ್ತೊಂದನ್ನು ಛೂ ಬಿಟ್ಟು
ಬಡಿದಾಡುತ್ತಿವೆ ಟಿ.ಆರ್.ಪಿ
ಎಂಬ ಕಕ್ಕ ಬಾಚಲು

ಗುರ್ರೆಂದು, ಕಡಿದಾಡಿ, ಮೂಸಿ
ಬಾಲ ಅಲ್ಲಾಡಿಸಿ, ತಿಪ್ಪೆಯ ಹಳಸಲು
ತಿಂದು ಹೂಸಿ, ಮುಸಿ ಮುಸಿ
ಒಳಗೊಳಗೇ ನಗುತ್ತಿವೆ, ಹೇಳುತ್ತಿವೆ
ಓಟು ಹಾಕುವ ಪೆದ್ದಗಳಿರಾ...
ನಾವು ನಾಯಿಗಳೆಲ್ಲಾ ಒಂದು ಎಂದು

ಯಾವುದು ಜೂಲು ನಾಯಿ,
ಮತ್ಯಾವುದು ಕಂತ್ರಿ ನಾಯಿ
ಎಲೆಕ್ಷನ್ನು ಹತ್ತಿರವಿರಲು
ಎಲ್ಲಾ ನಾಯಿಗಳದೂ ಒಂದೇ
ತೆರನಾದ ಕಿರಿಕಿರಿಯಾಗುವ
ಹಲ್ಕಿರಿದ ಹಾವಭಾವ

ನಾಯಿಗಳ ಕಚ್ಚಾಟ ನೋಡಿದಿರಾ???
ಬಿಡದಿರಿ ನಾಯಿಗಳ ನಿಮ್ಮ ಮನೆ ಮುಂದೆ
ಅವು ನೆಕ್ಕುವವು ನಿಮ್ಮ ಪಾದ
ಮಲಗಲೂ ರೆಡಿ ಚಪ್ಪಲಿ ಗೂಡಿನಲಿ
ನಿರಪಾಯಕಾರಿ ನಾಯಿಗಳವು
ಎಲೆಕ್ಷನ್ ಮುಗಿಯೋವರೆಗೂ,
ಕೃತ್ರಿಮ ಮಂದಹಾಸಕ್ಕೆ ಬಲಿಯಾಗದಿರಿ
ಜನಗಳೇ, ಇದು ನಿಮ್ಮ ಸೇಡು ತೀರುವ
ಸಮಯ ಎಚ್ಚೆತ್ತುಕೊಳ್ಳಿ


ಬುಧವಾರ, ಏಪ್ರಿಲ್ 10, 2013

ಉಗಾದಿ ಹಾಡೂ ಪಾಡೂ

ಎಲ್ರೂ ಬನ್ನಿ, ಸ್ವಲ್ಪ ತಿನ್ನಿ
ಬೇವು ಬೆಲ್ಲ ನೀವೂನೂ
ಉಗಾದಿ ಅಂದ್ರೆ ನಮ್ಗೋಳ್ ಹಬ್ಬ
ವಿಸೇಸ ಅಲ್ವೇ ನಿಮ್ಗೂನು

ಎಣ್ಣೆ ಜೊತ್ಗೆ ಬೇವಿನೆಲೆ ಹಾಕಿ
ಚರ್ಮ ಹೊಳೆಯಂಗ್ ಮೈಗೆ ತಿಕ್ಕಿ
ಸ್ವಲ್ಪೊತ್ತು ಬಿಸ್ಲಾಗ್ ನಿಂತ್ಗಂಡ್
ಬಿಸಿ ನೀರನ್ನಾ ಚೊಂಬ್ಲಿ ಹುಯ್ಕೊಂಡ್

ಹಕ್ಕೊಳ್ರಪ್ಪಾ ಹೊಸ ಬಟ್ಟೆ
ಹೋಳಿಗೆ ತುಪ್ಪಾ ತುಂಬಿದೆ ತಟ್ಟೆ
ಸೀಕರಿಣಿ ಇದ್ರಂತು ಮುಗ್ದೇ ಹೋಯ್ತು
ಕೋಸಂಬ್ರಿ, ಸಂಡ್ಗೆ ಜೊತ್ಗೆ ಇಳಸ್ರಿ ತುತ್ತು

ಚಿಲ್ರೆ ಕಾಸಲ್ ಜೂಜಾಡಿ
ಸೋತ್ರೆ ತಲೆ ತಗ್ಗಿಸಬ್ಯಾಡ್ರಿ
ವರ್ಸಕ್ಕೊಮ್ಮೆ ಬರೋದಲ್ವೆ ಹೊಸ ವರ್ಷ
ಇರ್ಲಿ ನಮ್ಗು ನಿಮ್ಗೂನು ದಿನಾ ಹರ್ಷ

ಸಂಜಿ ಆದೇಟ್ಗೆ ಹತ್ರಿ ಮಾಳಿಗೆ
ಹುಡ್ಕಿ ಕೈ ಮುಗೀರಿ ಚಂದ್ರಂಗೆ
ಕಷ್ಟ ಸುಖ ಅಂದ್ರೆ ಇದ್ದಂಗ್ ಬೇವು ಬೆಲ್ಲ
ಎರಡೂ ಇದ್ರೆ ನಮ್ಗೋಳ್ ಬಾಳು ರಸ್ಗುಲ್ಲಾ
 

ಭಾನುವಾರ, ಏಪ್ರಿಲ್ 7, 2013

ಹೀಗೊಂದು ಕ(ವ್ಯ)ಥೆಯು

ಆ ಸುನಿಲನೆಂಬ ಹುಡುಗ ತನ್ನ ಪ್ರೇಯಸಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾ ಇದ್ದ. ಅವರ ಲವ್ ಶುರು ಆಗಿದ್ದೇ ಒಂದು ರೀತಿಯ ವಿಚಿತ್ರ ಸನ್ನಿವೇಶದಲ್ಲಿ. ಅವಳು, ಅವನ ಪಕ್ಕದ ಮನೆಯ ಹುಡುಗಿ, ಓದಿನಲ್ಲಿ ತುಂಬಾ ಚುರುಕಾಗಿದ್ದವಳು. ಅವಳ ಮನೆಯಲ್ಲೋ ಕಿತ್ತು ತಿನ್ನುವ ಬಡತನ, ಇವಳು ಬಿ.ಎಸ್ಸಿಯ ನಂತರ ಎಂ.ಎಸ್ಸಿ ಮಾಡಬೇಕು ಅಂತ ಆಕಾಂಕ್ಷೆ ಇಟ್ಟುಕೊಂಡು ಹಾಗಲು ರಾತ್ರಿ ಕಷ್ಟ ಪಟ್ಟು ಓದುತ್ತಿದ್ದಳು. ಅವಳ ಓದಿಗೆ ಪ್ರತಿಫಲವಾಗಿ ಮೊದಲ ದರ್ಜೆಯಲ್ಲೇ ಪಾಸಾಗಿ ಯೂನಿವರ್ಸಿಟಿಯಲ್ಲಿ ಫ್ರೀ ಸೀಟು ಕೂಡ ಸಿಕ್ಕಿತ್ತು.

    ಎಲ್ಲಾ ಖರ್ಚು ಸೇರಿ ಎರಡು ವರ್ಷದ ಎಂ.ಎಸ್ಸಿ’ಗೆ ಹಾಸ್ಟೆಲ್ ಫೀಜು ಸೇರಿ ಸುಮಾರು ಎಪ್ಪತ್ತರಿಂದ ಎಂಭತ್ತು ಸಾವಿರ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಿ ಮನೆಯಲ್ಲಿ ಕೇಳಲಾಗಿ ಅವಳ ಅಪ್ಪ "ನನ್ನ ಹತ್ತಿರ ಅಷ್ಟೊಂದು ದುಡ್ಡು ಇಲ್ಲ ಮಗಳೇ ಬೇಕಾದ್ರೆ ಎಜುಕೇಷನ್ ಲೋನ್ ತಗೋ ನಿನ್ನ ಓದು ಮುಗಿದ ಮೇಲೆ ಕೆಲಸ ಹುಡುಕಿಕೊಂಡು ನಿನ್ನ ಲೋನ್ ನೀನು ತೀರಿಸಿಕೊ ಇಲ್ಲ ಅಂದ್ರೆ ಎಂ.ಎಸ್ಸಿ ಆಸೆ ಬಿಡು" ಅಂತ ಹೇಳಿದ್ದು ಕೇಳಿ ಇವಳಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಭಾಸವಾಗಿತ್ತು. ಇವನೆಂತಾ ಅಪ್ಪ ನಾನು ಚಿಕ್ಕವಳಾಗಿದ್ದಾಗಿನಿಂದಲೂ ನನಗೇನು ಕೊಡಿಸಿಲ್ಲ, ಒಮ್ಮೆಯಾದ್ರು ಕಾಟಚಾರಕ್ಕೂ ಕೂಡ ನಿನಗೇನು ಬೇಕಮ್ಮ ಮಗಳೇ ಅಂತ ಕೇಳಿಲ್ಲ. ಬರೀ ಮಗಾ ಮಗಾ ಅಂತ ಇದ್ದ ಒಂದು ಮನೆಯನ್ನೂ ಮಾರಿ ಅವನ ಇಷ್ಟದಂತೆಯೇ ಎಂ.ಬಿ.ಬಿ.ಎಸ್ ಓದಿಸಿದ. ಹೋಗಲಿ ಅಣ್ಣನಾದವನಾದ್ರು ತಂಗಿಯಾದ ನನಗೆ ಓದಲು ಸಹಾಯ ಮಾಡ್ತಾನೆ ಅಂದ್ರೆ ಅವನು ಓದೋದು ಮುಗಿದದ್ದೇ ತಡ ಮನೆಯಲ್ಲಿ ತಂಗಿ ಇದಾಳೆ ಅನ್ನೋದನ್ನೂ ಮರೆತು ತನ್ನ ಸಹಪಾಠಿಯೊಬ್ಬಳನ್ನು ಮದುವೆಯಾಗಿದ್ದ.

    ಅಣ್ಣನ ಹೆಂಡತಿ ನಗರದ ಪ್ರಮುಖ ಡಾಕ್ಟರರೊಬ್ಬರ ಮಗಳು, ಅವಳು ತನ್ನ ಪ್ರೀತಿಯ ಬಗ್ಗೆ ತಂದೆಗೆ ಹೇಳಲಾಗಿ ಅವರು ಇವನನ್ನು ಕರೆಸಿ "ನೋಡಪ್ಪಾ ನೀನು ನನ್ನ ಮಗಳು ಇಬ್ಬರೂ ಡಾಕ್ಟರ್ಸ್ ಆಗಿರೋದ್ರಿಂದ ನನಗೆ ನಿಮ್ಮ ಮದುವೆ ಮಾಡೋಕೆ ಯಾವುದೇ ಅಭ್ಯಂತರ ಇಲ್ಲ ಆದ್ರೆ ಒಂದು ಕಂಡೀಷನ್ನಿದೆ ನೀನು ನನ್ನ ಒಬ್ಬಳೇ ಮಗಳನ್ನು ಮದುವೆ ಆಗಬೇಕು ಅಂದ್ರೆ, ನಾನು ಕಷ್ಟಪಟ್ಟು ಕಟ್ಟಿ ಬೆಳೆಸಿರೋ ನನ್ನ ಆಸ್ಪತ್ರೆಗೆ ನನ್ನ ನಂತರ ನೀನೇ ವಾರಸುದಾರ ಆಗಬೇಕು ಅನ್ನೋ ಆಸೆ ನಿನಗಿದ್ರೆ ನಿನ್ನ ಅಪ್ಪ, ಅಮ್ಮ, ತಂಗಿ ಎಲ್ಲರನ್ನೂ ಮರೆತು ನನ್ನ ಮನೆಯಳಿಯ ಆಗಿ ಇರಬೇಕು" ಅಂತ ಹೇಳಿದ್ರಂತೆ. ಮೊದಲಿಂದಲೂ ಸ್ವಭಾವತಃ ಸ್ವಾರ್ಥಿಯಾಗಿದ್ದ ಅಣ್ಣನೋ ದಿನಾ ಸಾಯೋರಿಗೇ ಅಳೋರ್ಯಾರು ಅಂದುಕೊಂಡು ಅಪ್ಪ, ಅಮ್ಮ, ತಂಗಿ ಜೀವಂತವಾಗಿದ್ದಾರೆ ಅವರಿಗೆ ನೆಪಕ್ಕಾದ್ರು ಒಂದು ಮಾತು ಹೇಳಬೇಕು ಅನ್ನುವುದನ್ನು ಮರೆತು ಮದುವೆಯಾಗಿದ್ದ.

    ತನ್ನ ಅಣ್ಣ ಮದುವೆಯಾಗಿರೋದು ಅಪ್ಪನಿಗೆ ಯಾರೋ ಹೇಳಿ, ಯಾಕಪ್ಪಾ ಮಗನೇ ಹೀಗೆ ಮಾಡಿದಿ ಅಂತ ಕೇಳಬೇಕು ಅಂತ ಅವನ ಬಳಿ ಹೋದರೆ, "ನೀನು ಇಷ್ಟು ದಿನ ಕೊಟ್ಟ ಕಷ್ಟನೇ ಸಾಕು, ಎಷ್ಟು ದಿನಾ ಅಂತ ನಿನ್ನ ಗೋಳು ನೋಡ್ತಾ ಇರೋಕಾಗುತ್ತೆ. ನಾನು ಈಗ ತಾನೆ ಲೈಫಿನಲ್ಲಿ ಸೆಟ್ಲು ಆಗ್ತಾ ಇದೀನಿ, ನನಗೂ ಮದುವೆಯಾಗಿದೆ ನನ್ನ ಹೆಂಡತಿ ಬೇರೆ ಈಗಾಗ್ಲೇ ಗರ್ಭಿಣಿ, ನನ್ನ ಮಾವ ನಿನ್ನ ಜೊತೆ ಮಾತಾಡ್ತಾ ಇರೋದು ಗೊತ್ತಾದ್ರೆ ಬೇಜಾರಾಗ್ತಾರೆ ಸುಮ್ನೆ ತೊಂದರೆ ಕೊಡಬೇಡ ಹೋಗು" ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದನಂತೆ. ಇನ್ನು ಅಪ್ಪನೋ ಬಾಯಿ ಸತ್ತ ಪ್ರಾಣಿ ಅಂತನೇ ಊರಲ್ಲೆಲ್ಲಾ ಫೇಮಸ್ಸು. ಇದುವರೆಗೂ ಒಬ್ಬರಿಗೂ ದನಿ ಎತ್ತರಿಸಿ ಮಾತಾಡಿಲ್ಲ, ಅಮ್ಮ ಎಷ್ಟೇ ಕೂಗಾಡಿದ್ರು ಏನೇ ಕೇಳಿಸಿಯೇ ಇಲ್ಲ ಅನ್ನುವಂತೆ ತೆಪ್ಪಗೆ ಒಂದು ಕಡೆ ಕೂತಿರ್ತಾನೆ. ಮಗ ಅಷ್ಟೆಲ್ಲಾ ಮಾತಾಡಿದ್ರು ಕೂಡ ತಿರುಗಿ ಒಂದೂ ಹೇಳದೆ ಹಾಗೆ ಬಂದಿದ್ದಾನೆ. ಅಮ್ಮ ಹೇಗೆ ಏಗ್ತಿದಾಳೋ ಅಪ್ಪನ ಹತ್ರ. ಯಾವಾಗ್ಲೂ ತನ್ನೊಳಗೆ ಇರೋ ಅಸಹನೆಯನ್ನು ಮೂರೊತ್ತು ಎಲ್ಲರ ಹತ್ರ ಜಗಳ ಮಾಡ್ತಾ ಹೊರಗೆ ಹಾಕ್ತಾ ಇರ್ತಾಳೆ. ಈವಮ್ಮ ಜಗಳಗಂಟಿ ಅದಕ್ಕೆ ಆವಯ್ಯ ಯಾವಾಗ್ಲೂ ಸೈಲೆಂಟ್ ಆಗಿರ್ತಾನೆ ಅಂತ ಅವರಿವರು ಮಾತಾಡ್ತಾ ಇರ್ತಾರೆ. ಇಂತಹವರ ಹೊಟ್ಟೆಯಲ್ಲಿ ಹುಟ್ಟೋಕೆ ನಾನು ಹೋದ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆನೋ, ಈಗ ನೋಡಿದ್ರೆ ನನ್ನ ಎಂ.ಎಸ್ಸಿ ಓದಿಸೋಕೆ ದುಡ್ಡಿಲ್ಲ ಅಂತಿದಾನೆ ಎಂದು ಇದೆಲ್ಲವನ್ನೂ ಒಂದೇ ಉಸಿರಿನಲ್ಲಿ ನೆನಪಿಸಿಕೊಂಡಿದ್ದಳು.

    ಇವರನ್ನೆಲ್ಲಾ ನಂಬಿಕೊಂಡ್ರೆ ನಾನು ನನ್ನ ಜೀವನ ರೂಪಿಸಿಕೊಳ್ಳೋಕೆ ಆಗಲ್ಲಾ ಇಂತಹ ಅಪ್ಪ ಮಗಳಾದ ನನ್ನ ಮದುವೆಯನ್ನೂ ಒಳ್ಳೆಯ ರೀತಿ ಮಾಡಿ ಕೊಡ್ತಾನೆ ಅನ್ನೋ ನಂಬಿಕೆಯಂತು ಉಳಿದಿಲ್ಲ ಎಂದು ಮನಸಿನಲ್ಲೇ ಲೆಕ್ಕಾಚಾರ ಹಾಕಿ ಎಂ.ಎಸ್ಸಿ ಖರ್ಚಿಗೆ ಲೋನ್ ತಗೊಳೋಕೆ ಅಂತ ಅಪ್ಪನನ್ನೂ ಕರ್ಕೊಂಡು ಬ್ಯಾಂಕಿಗೆ ಹೋಗಿದ್ದಳು. ಅಲ್ಲಿ ಬ್ಯಾಂಕಿನ ಮ್ಯಾನೇಜರು "ಸರಿಯಮ್ಮಾ ಲೋನು ಕೊಡ್ತೀವಿ ಆದರೆ ಸೆಕ್ಯೂರಿಟಿಗೆ ಅಂತ ಏನಾದ್ರು ಬೇಕಮ್ಮಾ ಇಲ್ಲ ಅಂದ್ರೆ ಕೊಡೋಕಾಗಲ್ಲ" ಅಂತ ಹೇಳಿ ಕಳುಹಿಸಿದ್ದರು. ಇವಳಿಗೆ ಇದ್ದ ಎಲ್ಲಾ ಅವಕಾಶಗಳೂ ಕೈ ತಪ್ಪಿ ಹೋದ ಅನುಭವವಾಗಿತ್ತು. ಬಟ್ಟೆಯಂಗಡಿಯಲ್ಲಿ ರೈಟರ್ ಆಗಿ ಕೆಲಸ ಮಾಡ್ತಾ ಇರೋ ಅಪ್ಪ ಈಗಾಗಲೇ ಮಗನ ಓದಿಗೆ ಮನೆಯನ್ನೂ ಮಾರಿ ಊರಲ್ಲೆಲ್ಲಾ ಸಾಲ ಮಾಡಿಕೊಂಡಿದಾನೆ. "ಅಪ್ಪ ನೀನು ಬರೀ ಮಗನಿಗೇ ಇಷ್ಟೊಂದು ಇಂಪಾರ್ಟೆನ್ಸ್ ಕೊಡೋದು ಸರಿ ಅಲ್ಲ ಇನ್ನೂ ಓದೋದು ಮುಗಿದಿಲ್ಲಾ ಅವನದು ಆದರೂ ನಿನ್ನ ಒಂಚೂರೂ ಲೆಕ್ಕಕ್ಕೆ ತಗೊಳ್ದೆ ಮಾತಾಡ್ತಾನೆ, ಮುಂದೆ ನಾನು ಬೀದಿಗೆ ಬೀಳ್ಬೇಕಾಗುತ್ತೆ" ಅಂತ ಅಂದಿದ್ದಕ್ಕೆ "ಇಲ್ಲ ಮಗಳೇ ನಿನ್ನ ಅಣ್ಣ ಅಲ್ವಾ ಹಾಗೆಲ್ಲಾ ಮಾತಾಡಬಾರದು ಅವನು ಡಾಕ್ಟರ್ ಆದ ಮೇಲೆ ಮನೆ ಜವಾಬ್ದಾರಿನ ಅವನೇ ವಹಿಸಿಕೊಳ್ತಾನೆ ಅವನು ಓದೋದು ಮುಗಿಯುವವರೆಗೂ ನಾವೆಲ್ಲಾ ಸ್ವಲ್ಪ ಕಷ್ಟಪಡಲೇಬೇಕು ಅಂತ ನನಗೇ ಬುದ್ಧಿವಾದ ಹೇಳಿದ್ದ" ಆದರೆ ಮುಂದೆ ನಡೆದಿದ್ದೆಲ್ಲಾ ನಾನು ಹೇಳಿದ ಹಾಗೆ ತಾನೇ ಆಗಿದ್ದು. ಬಾಯಲ್ಲಿ ಮಚ್ಚೆ ಇರೋ ನಾನು ಹೇಳೋದು ಎಂದಿಗೂ ಸುಳ್ಳು ಆಗಲ್ಲ ಅವತ್ತು ನಾನಂದುಕೊಂಡ ಹಾಗೇನೆ ನಾಮರ್ದನ ಹಾಗೆ ಮನೆಯ ಜವಾಬ್ದಾರಿ ಹೊರದೇ ಶ್ರೀಮಂತ ಮಾವನ ಮನೆಯ ನಾಯಿಯಾಗಿದ್ದಾನೆ. ಇಂತಹ ಮನೆಯಲ್ಲಿ ಹುಟ್ಟಿದ ನನ್ನ ಹಣೆಬರಹಕ್ಕೆ ಏನು ತಾನೆ ಮಾಡೋಕಾಗುತ್ತೆ, ಒಂದು ವರ್ಷ ಕೆಲಸ ಮಾಡಿಯಾದರೂ ಸರಿ ಹಣ ಕೂಡಿಸಿ ಎಂ.ಎಸ್ಸಿ ಓದಲೇಬೇಕು ಎಂದು ದೃಢ ನಿಶ್ಚಯಿಸಿ ಮನೆಯಿಂದ ಸ್ವಲ್ಪ ದೂರ ಇದ್ದ ಪ್ರೈಮರಿ ಸ್ಕೂಲಿಗೆ ಶಿಕ್ಷಕಿಯಾಗಿ ಸೇರಿದ್ದಳು.

    ಕೆಲಸಕ್ಕೆ ಸೇರಿ ನಾಲ್ಕೈದು ತಿಂಗಳಾಗಿತ್ತಷ್ಟೇ ಸಂಜೆ ಏಳರ ಸುಮಾರಿಗೆ ಅಪ್ಪ ಇನ್ನೂ ಮನೆಗೆ ಬಂದಿರಲಿಲ್ಲ. ಆಗ ಒಬ್ಬ ಬುಡುಬುಡುಕೆಯವನು ಮನೆಯ ಬಾಗಿಲಲ್ಲಿ ನಿಂತುಕೊಂಡು "ನುಡಿದೈತೆ ನುಡಿದೈತೆ ಹಾಲಕ್ಕಿ ಶಕುನ ನುಡಿದೈತೆ, ನಿಮ್ಮ ಕಷ್ಟಕ್ಕ ಪರಿಹಾರ ಹೇಳಾಕ ಕಳಿಸೈತೆ, ನಾ ಹೇಳಿದ್ದು ನಿರ್ಲಕ್ಸ ಮಾಡಿದರ ಮನೆ ಯಜಮಾನನ ಸಾವಾಗುತೈತೆ" ಅಂತ ಇಡೀ ಓಣಿಗೇ ಕೇಳುವಂತೆ ಕೂಗಿದ್ದ. ನಾನೇನೋ ಮನೆ ಯಜಮಾನ ಅಂದ್ರೆ ನಾವಿರುವ ಬಾಡಿಗೆ ಮನೆಯ ಮಾಲೀಕನ ಬಗ್ಗೆ ಇವನು ಬಡಬಡಿಸ್ತಾ ಇರೋದು ಅಂತಾ ಸುಮ್ಮನೇ ಇದ್ದೆ ಆದ್ರೆ ಅಮ್ಮ ಕೇಳ್ಬೇಕಲ್ಲ "ಅಯ್ಯೋ ನನ್ನ ಗಂಡನಿಗೆ ಏನಾದ್ರು ಆದ್ರೆ ನನ್ನ ಗತಿ ಏನು, ನೀವೇಳೋದಕ್ಕೆ ಅರ್ಥ ಏನು ಸ್ವಾಮಿ ಅದಕ್ಕೆ ಪರಿಹಾರ ಏನು ಮಾಡಿಸಬೇಕು" ಅಂತ ಬುಡುಬುಡುಕೆಯವನನ್ನು ಮನೆಯ ಒಳಗೆ ಬರಮಾಡಿಕೊಂಡು ಕೇಳಲಾಗಿ. ಆ ಬುಡುಬುಡುಕೆಯವನು "ನೀವು ಅನುಭವಿಸ್ತಾ ಇರೋ ತೊಂದ್ರೆ ಅಂತಿಂತದ್ದಲ್ಲಮ್ಮಾ ರಕುತ ಪಿಶಾಚಿಗಳ ಕಣ್ಣು ನಿಮ್ಮ ಮನೆ ಮೇಲೆ ಬಿದ್ದೈತೆ, ಇಗಾಗ್ಲೆ ಸಮಸ್ಸೆ ಸುರುವಾಗಿ ಭೋ ಟೇಮ್ ಆಗೈತೆ, ತಡ ಮಾಡಿದರೆ ದೊಡ್ಡ ಅನಾವುತ ಆಗ್ತೈತೆ, ನಾನೇಳಿದಂಗೆ ಒಂದು ಸಾಂತಿ ಮಾಡ್ಸಿ, ಪೂಜೆ ಮಾಡ್ಸಿ" ಅಂದ. ನನ್ನ ಅಮ್ಮನಿಗೋ ಇಂತದ್ದರಲ್ಲೆಲ್ಲಾ ಭಯ ಭಕ್ತಿ ಜಾಸ್ತಿ, ಆಯ್ತು ಸ್ವಾಮೋರ ಅದೇನು ಪೂಜೆ ಮಾಡೋದು ಏಳಿ ಮಾಡಿಸ್ತೀನಿ ಅಂದದ್ದಕ್ಕೆ ಅವನು ಪೂಜೆಗೆ ಬೇಕಾದ ಸಾಮಾನುಗಳ ಒಂದು ಲಿಸ್ಟೇ ಕೊಟ್ಟು "ಈ ಸ್ವಾಮಾನೆಲ್ಲ ಜೋಡಿಸಿ ಇಟ್ಕಳಿ ನಾಳೆ ಇದೇ ಟೇಮಿಗೆ ಬರ್ತೀನಿ ಪೂಜೆ ಮಾಡೋದೆಲ್ಲ ಮಸಾಣದಾಗೆ ನಿಮ್ಗೆ ಬರಾಕ ಹೆದರ್ಕೆ ಆದ್ರೆ ನಿಮ್ಮ ಪರುವಾಗಿ ನಾನೆ ಈಗಿ ಪೂಜೆ ಮಾಡ್ಕತೀನಿ, ಇವತ್ತು ನಾನು ಬಂದಿದ್ದು ನೀನಾಗ್ಲಿ ನಿನ್ನ ಮಗಳಾಗ್ಲಿ ಯಜಮಾನಂಗೆ ಏಳ್ಬಾರ್ದು ಏಳಿದ್ರೆ ರಕ್ತ ಕಾರಿ ಸಾಯ್ತಾನೆ, ನೆಪ್ಪಿರ್ಲಿ ನಾಳೆ ಇದೇ ಟೇಮಿಗೆ ಬಂದು ಪೂಜೆ ಸಾಮಾನು ತಗೊಂಡಿಯ್ತೀನಿ, ಪೂಜೆ ಖರ್ಚು ಅಂತ ಒಂದಿಪ್ಪತ್ಸಾವ್ರ ಆಯ್ತದೆ, ತೆಗೆದಿಟ್ಕಳಿ" ಅಂದು ಅಲ್ಲಿಂದ ಹೊರಟು ಹೋದ. ಅವನು ಹೇಳಿದ ರೀತಿಗೆ ನಾನು ಕೂಡ ಹೆದರಿದ್ದೆ ನನ್ನ ಅಪ್ಪನೂ ಸತ್ತು ಹೋದ್ರೆ ಮುಂದಿನ ಗತಿ ಏನು ಎಂ.ಎಸ್ಸಿ ಬೇಕಾದ್ರೆ ಇನ್ನು ಎರಡು ವರ್ಷ ಬೇಕಾದ್ರು ಮಾಡಬಹುದು ಅಂತ ಅಂದುಕೊಂಡು ಅಲ್ಲಿವರೆಗೆ ಕೆಲಸ ಮಾಡಿ ಕೂಡಿಟ್ಟಿದ್ದ ದುಡ್ಡನ್ನು ಅಮ್ಮನ ಕೈಗೆ ಕೊಟ್ಟೆ.

     ಅಪ್ಪ ಕೆಲಸ ಮುಗಿಸಿ ಬರೋದೆ ದಿನಾಲು ರಾತ್ರಿ ಒಂಭತ್ತಾಗುತಿತ್ತು. ಅಷ್ಟರೋಳಗೇ ಅವನಿಗೆ ಬೇಕಾದ ಪೂಜೆ ಸಾಮಗ್ರಿ,ದುಡ್ಡನ್ನು ಕೊಟ್ಟು ಕಳಿಸೋದು ಅಂತ ಅಮ್ಮ ನಾನು ಮಾತಾಡಿಕೊಂಡಿದ್ವಿ. ಹೇಳಿದ ಹಾಗೆ ಬುಡುಬುಡುಕೆಯವನು ಸಂಜೆ ಆರೂವರೆಗೇ ಬಂದಿದ್ದ. ಪೂಜೆ ಸಾಮಾನು ಇಪ್ಪತ್ತು ಸಾವಿರ ದುಡ್ಡೂ ಅವನ ಕೈಗೆ ಕೊಟ್ಟ ಮೇಲೆ "ನೋಡಮ್ಮ ತಾಯಿ ನಿನ್ನ ಗಂಡ ಹಳೇ ಜನ್ಮದ ಪಾಪ ಇರೋದಕ್ಕೇ ನಿನ್ನ ಮಾಂಗಲ್ಯದ ಪವರ್ರು ಕಡಿಮೆ ಆಗೈತೆ, ಮಾಂಗಲ್ಯ ಪೂಜೆನ ಮಸಾಣದಾಗೆ ಆಗ ತಾನೆ ಹೂತ ಹೆಣ ತೆಗೆದು ಮಾಡ್ಬೇಕು" ಅಂತ ಹೇಳಿದ. ಅದಕ್ಕೆ ಅಮ್ಮ "ಸಾಮಿ ನಾವು ಹೆಣ್ಮಕ್ಳು ನಾವು ಹೆಂಗೆ ಸುಡುಗಾಡಿಗೆ ಬಂದು ಪೂಜೆ ಮಾಡೋದು" ಅಂದಿದ್ದಕ್ಕೆ "ನೋಡು ತಾಯಿ ನಿನಗೆ ಮಸಾಣಕ್ಕೆ ಬರಾಕಾಗಕಿಲ್ಲ ಅಂದ್ರೆ ಪರುವಾಗಿಲ್ಲ ಇವತ್ತು ರಾತ್ರಿ ಮಟ್ಟಿಗೆ ನನ್ನ ಕೈಗೆ ತಾಳಿ ಕೊಟ್ಟಿರು ರಾತ್ರಿ ಪೂಜೆ ಮಾಡಿ ಬೆಳಿಗ್ಗೆ ವಾಪಸ್ಸು ಕೊಡ್ತೀನಿ" ಅಂದ. ಅದಕ್ಕೆ ನಾನು ಅನುಮಾನದಿಂದ ಅಮ್ಮನ್ನ ತಡೆಯಲಾಗಿ ಅವನು "ನಿನ್ನ ಮನೆ ಕಷ್ಟ ಪರಿಹಾರ ಮಾಡಾಕಂತ ಬಂದ್ರೆ ನನ್ನೆ ಅನುಮಾನದಿಂದ ನೋಡ್ತೀರ, ನನಗೆ ಕೋಪ ಬಂದ್ರೆ ನಿಮ್ಮ ಕುಟುಂಬ ಸರ್ವನಾಸಾಗುವಂಗೆ ಸಾಪ ಕೊಡ್ತೀನಿ" ಅಂತ ಸಿಟ್ಟಿನಿಂದ ಕೂಗಾಡಿದ. ಅಮ್ಮ ಹೆದರಿ ಹತ್ತು ತೊಲೆಯ ತಾಳಿ ತೆಗೆದು ಕೊಟ್ಟು ಹರಿಸಿನ ದಾರ ಕಟ್ಟಿಕೊಂಡು "ಸಾಮಿ ಗಂಡನಿಗೆ ಗೊತ್ತಾದ್ರೆ ಸುಮ್ನೆ ಪ್ರಾಬ್ಲಮ್ಮಾಕ್ಕಾತಿ ಒಂದು ದಿವ್ಸ ಎಂಗೋ ನೋಡ್ಕಂತೀನಿ ಮರೀದೆ ನಾಳೆ ಪೂಜೆ ಮಾಡಿ ತಂದು ಕೊಟ್ಬಿಡಿ ಸಾಮಿ ಎಂಗೋ ಗಂಡ ಉಳ್ಕಂಡ್ರೆ ಸಾಕು" ಅಂದಳು. ಬುಡುಬುಡುಕೆಯವನು ಬಂಗಾರದ ತಾಳಿ, ದುಡ್ಡು ಸಿಕ್ಕಿದ್ದಕ್ಕೆ ಪ್ರಸನ್ನನಾಗಿ "ಹೆದರಬೇಡ ತಾಯಿ ಎಲ್ಲಾ ಒಳ್ಳೇದಕಾತಿ" ಅಂತ ಜಾಗ ಖಾಲಿ ಮಾಡಿದ.

    ಮೂರು ನಾಲ್ಕು ದಿನ ಆದ್ರೂ ಬುಡುಬುಡುಕೆಯವನು ವಾಪಸ್ಸು ಬರದಿದ್ದನ್ನು ಕಂಡು ಮೋಸ ಹೋಗಿರೋದಂತು ಪಕ್ಕಾ ಆಗಿತ್ತು. ತಾಳಿ ಎಲ್ಲಿ ಕಾಣ್ತಾ ಇಲ್ಲ ಅಂತ ಅಪ್ಪ ಕೇಳಿದ್ದಕ್ಕೆ ಅಮ್ಮ ಆಗಿದ್ದೆಲ್ಲಾ ಹೇಳಿ ನಿನ್ನ ಜೀವ ಉಳಿಸೋಕೆ ಹೋಗಿ ಎಲ್ಲಾ ಕಳ್ಕೊಂಡೆ ಅಂತ ಅಪ್ಪನ ಮೇಲೇ ಗೂಬೆ ಕೂರಿಸಿದಳು. ಅಪ್ಪ ಯಥಾ ರೀತಿ ಮುಂದೆ ಮಾತಾಡೋಕೆ ಹೋಗ್ಲಿಲ್ಲ. ಎಂ.ಎಸ್ಸಿಗೆ ಅಂತ ಕೂಡಿಟ್ಟ ದುಡ್ಡು ಕೂಡ ಹೋಯ್ತು ಪ್ರೈಮರಿ ಸ್ಕೂಲಿಗೆ ಪಾಠ ಹೇಳ್ತಾ ಇದ್ದಿದ್ರಿಂದ ಬರ್ತಾ ಇದ್ದಿದ್ದೆ ತಿಂಗಳಿಗೆ ಮೂರೂವರೆ ಸಾವಿರ ರೂಪಾಯಿ. ಇನ್ನು ಏಳು ತಿಂಗಳು ಕೆಲಸ ಮಾಡಿದ್ರು ಕೂಡ ಎಂ.ಎಸ್ಸಿಗೆ ಬೇಕಾದಷ್ಟು ಕೂಡಿಡೋಕೆ ಆಗಲ್ಲ ಅಂತ ಅವಳಿಗೂ ಗೊತ್ತಾಗಿ ಹೋಗಿತ್ತು ಆದರೂ ಯಾಂತ್ರಿಕವಾಗಿ ಕೆಲಸಕ್ಕೆ ಹೋಗಿ ಬರುತ್ತಿದ್ದಳು.

    ಇಂತಹ ಸಮಯದಲ್ಲೇ ಅವಳಿಗೆ ಸುನಿಲನ ಪರಿಚಯ ಆಗಿದ್ದು. ಮೊದಮೊದಲು ದಾರಿಯಲ್ಲಿ ಆಗೀಗ ಸಿಕ್ಕಾಗ ಇಬ್ಬರ ನಡುವೆ ಮುಗುಳ್ನಗೆ ಮಿನಿಮಯ ಆಗ್ತಾ ಇತ್ತು. ಆಮೇಲೆ ಅವನು ಹೋಗುತಿದ್ದ ಕಾಲೇಜು ತನ್ನ ಸ್ಕೂಲಿನ ಹಾದಿಯಲ್ಲೇ ಇದ್ದಿದ್ದರಿಂದ ಅವರಿಬ್ಬರ ಮುಗುಳ್ನಗೆಯಿಂದ ಪರಿಚಯ, ಪರಿಚಯದಿಂದ ಪ್ರೀತಿಯಾಗಿ ಬದಲಾಗಿತ್ತು. ಅವಳು ತನ್ನ ಬಗ್ಗೆ ಎಲ್ಲವನ್ನೂ ಅವನೊಂದಿಗೆ ಹೇಳಿಕೊಂಡಿದ್ದಳು. ಅವನೂ ಕೂಡ ತಾನು ಡಿಪ್ಲೋಮ ಮುಗಿಸಿ ಎಂಜಿನಿಯರಿಂಗ್ ಮಾಡ್ತಾ ಇರೋದರ ಬಗ್ಗೆ ಹೇಳಿದ್ದ ಮತ್ತು ಅವಳಿಗೆ ತಾನು ಡಿಪ್ಲೋಮದ ಮೇಲೆಯೇ ಕೆಲಸ ಹುಡುಕಿಕೊಂಡು ಅವಳ ಆಸೆಯಾದ ಎಂ.ಎಸ್ಸಿ ಖರ್ಚನ್ನೆಲ್ಲಾ ಭರಿಸುವುದಾಗಿಯೂ, ಎಂ.ಎಸ್ಸಿ ಮುಗಿದ ಮೇಲೆ ಇಬ್ಬರು ಮದುವೆಯಾಗೊಣ ಎಂದು ಹೇಳಿದ್ದ. ಅಂತೆಯೇ ಎಂಜಿನಿಯರಿಂಗ್ ಅರ್ಧಕ್ಕೆ ನಿಲ್ಲಿಸಿ ದೂರದ ಗೋವಾದಲ್ಲಿ ಕೆಲಸ ಹಿಡಿದು ಅವಳ ಫೀಜಿಗೆ ಬೇಕಾದ ದುಡ್ಡನ್ನು ಉಳಿಸಿ ಕಳುಹಿಸಿಕೊಟ್ಟಿದ್ದ.

    ಅವಳೂ ಕೂಡ ತನ್ನ ಬಹುದಿನದ ಕನಸು ಸುನಿಲನಿಂದ ನನಸಾಗಿದ್ದಕ್ಕಾಗಿ ಅವನಿಗೆ ತನ್ನ ತನು ಮನವನ್ನೆಲ್ಲಾ ಧಾರೆ ಎರೆದಿದ್ದಳು. ಹಿಂದೆಂದಿಗಿಂತಲೂ ಹೆಚ್ಚಿನ ಸಂತೋಷದಿಂದ ತಾನಿರುವುದು ಅವಳಿಗೆ ಗಮನಕ್ಕೆ ಬಂದಿತ್ತು ಕೂಡ. ತುಂಬಾ ಕೃಶಳಾಗಿದ್ದ ಅವಳು ದಪ್ಪವಾಗಲೆಂದು ಏನೇನೋ ಔಷಧಿಗಳನ್ನೆಲ್ಲಾ ಕೊಡಿಸಿದ್ದ ಮತ್ತು ಹೆಸರುಕಾಳನ್ನು ದಿನಾಲು ಮೊಳಕೆ ಹೊಡಿಸಿ ತಿನ್ನುವಂತೆಯೂ ತಾಕೀತು ಮಾಡಿದ್ದ. ಹೀಗೇ ಇದ್ದವಳಿಗೆ ಅದೇ ಯೂನಿವರ್ಸಿಟಿಯ ಹೊಸ ಪ್ರೊಫೆಸರ್ ಒಬ್ಬ ಗಂಟು ಬಿದ್ದಿದ್ದ ಸಾಲದ್ದಕ್ಕೆ ಅವಳ ಮನೆಗೆ ಹೋಗಿ ನಿಮ್ಮ ಮಗಳನ್ನು ತನಗೆ ಮದುವೆ ಮಾಡಿ ಕೊಟ್ಟರೆ ತಬ್ಬಲಿಯಾದ ತಾನು ಆರ್ಥಿಕವಾಗಿ ಏನೇ ಸಹಾಯ ಬೇಕಾದರೂ ಮಾಡುವುದಾಗಿ ಅವಳ ಅಪ್ಪ, ಅಮ್ಮನ ತಲೆ ಕೆಡಿಸಿದ್ದ. ಇದು ಗೊತ್ತಾದಾಗ ಸುನಿಲ ಆ ಪ್ರೊಫೆಸರ್‌ಗೆ ಧಮಕಿ ಹಾಕಿ ತನ್ನ ಹುಡುಗಿಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲವೆಂದು ಎಚ್ಚರಿಸಿ ಬಂದಿದ್ದ.

    ಕೊನೆಗೊಂದು ದಿನ, ಬರೀ ಡಿಪ್ಲೋಮ ಮಾಡಿ ಸಣ್ಣ ಕೆಲಸ ಮಾಡುತ್ತಿರುವ ನೀನು ಎಂ.ಎಸ್ಸಿ ಮಾಡುತ್ತಿರುವ ತನಗೆ ಇಷ್ಟವಿಲ್ಲವೆಂದೂ ಬೇಕಾದರೆ ಅವನು ಓದಿಸಲು ಖರ್ಚು ಮಾಡಿದ ದುಡ್ಡಿನ ಎರಡರಷ್ಟನ್ನು ಅವನ ಮುಖಕ್ಕೆ ಬಿಸಾಡುವುದಾಗಿಯೂ ಅವಳು ಹೇಳಿದಾಗ ಮಾತ್ರ ಅವನಿಗೆ ಭೂಮಿಯೇ ಬಾಯಿ ಬಿರಿದು ನುಂಗಿದ ಅನುಭವವಾಗಿತ್ತು ಆದರೂ ಸಾವರಿಸಿಕೊಂಡು ನಾನು ಖರ್ಚು ಮಾಡಿದ ಹಣ ವಾಪಸ್ಸು ಕೊಡಬಹುದು ಆದರೆ ನಾ ಧಾರೆಯೆರೆದ ಪ್ರೀತಿಯನ್ನಲ್ಲ ಅಂತ ಹೇಳಿ ವಾಪಸ್ಸು ಬಂದಿದ್ದ.

    ಅವಳು ದೂರಾದ ಮೇಲೆ ಜೀವನವೇ ಶೂನ್ಯವೆನ್ನಿಸಿ ಒದ್ದಾಡಿದ್ದ. ದಿನದಿಂದ ದಿನಕ್ಕೆ ಅವಳ ಮೇಲಿನ ಕೋಪ ಹೆಚ್ಚುತ್ತಾ ಹೋಗಿತ್ತು. ಅವಳನ್ನು ಹುಡುಕಿ ಕೊಂದುಬಿಡಬೇಕು ಎಂದು ಒಮ್ಮೊಮ್ಮೆ ಅಂದುಕೊಳ್ಳುತ್ತಿದ್ದ. ಬೇರೆಯವರಾಗಿದ್ದರೆ ಕುಡಿದು ಕುಡಿದೂ ದೇವದಾಸ ಆಗಿಬಿಡುತಿದ್ದರೇನೋ ಆದರೆ ಇವನು ಅವಳ ಮೇಲಿನ ಸಿಟ್ಟು ಹೊರ ಹಾಕಲು ಬೇರೆಯದೇ ದಾರಿ ಹುಡುಕಿಕೊಂಡಿದ್ದ. ಅದೇನು ಅಂದರೆ ಸುಸಜ್ಜಿತ ವ್ಯಾಯಾಮ ಶಾಲೆಯೊಂದಕ್ಕೆ ಸೇರಿಕೊಂಡಿದ್ದ. ಅವಳ ಮೇಲಿನ ಸಿಟ್ಟನ್ನು ಭಾರ ಎತ್ತುವುದು, ಓಡುವುದು ಮುಂತಾದ ಇತರೆ ವ್ಯಾಯಾಮ ಸಲಕರಣೆಗಳನ್ನುಪಯೋಗಿಸುತ್ತಾ ಅವಳ ಮೇಲಿನ ಮೊದಲಿನ ಸಿಟ್ಟನ್ನು ಕಡಿಮೆ ಮಾಡಿಕೊಂಡಿದ್ದ. ಇದರಿಂದ ಅವನ ದೈಹಿಕ ಸೌಂದರ್ಯ ಹೆಚ್ಚಿ ಇತರೆ ಹುಡುಗಿಯರೂ ಅವನೆಡೆಗೆ ಆಕರ್ಷಿತರಾಗಿ ಮದುವೆಯಾಗಲು ಹಾತೊರೆಯತೊಡಗಿದ್ದರು. ಇತ್ತ ಅವನ ಮೊದಲಿನ ಪ್ರೇಯಸಿ ಆ ಪ್ರೊಫೆಸರ್‌ ಜೊತೆ ಮದುವೆಯಾದ ಮೇಲೆ ತಾನು ಅವನಿಗೆ ಮೂರನೆಯ ಹೆಂಡತಿಯೆನ್ನುವುದು ಗೊತ್ತಾಗಿತ್ತು. ಈಗ ಆ ಪ್ರೊಫೆಸರ್‌ನ ಬಿಟ್ಟು ತನ್ನ ಅಪ್ಪನ ಮನೆಯಲ್ಲಿಯೇ ಇರುವ ಅವಳು ಮೊದಲಿನಂತೆಯೇ ಸಣ್ಣ ಕೆಲಸವೊಂದಕ್ಕೆ ಸೇರಿ ತನ್ನ ಜೀವನವನ್ನು ಹಳಿದುಕೊಳ್ಳುತ್ತಾ ಬದುಕುತ್ತಿದ್ದಾಳೆ.          

   

   
   

ಶುಕ್ರವಾರ, ಮಾರ್ಚ್ 29, 2013

ಮೌನ ರಹಸ್ಯ


ಆ ಇಬ್ಬರು ಪ್ರೇಮಿಗಳ ನಡುವೆ ಮೊದಲಿದ್ದ ಮಾತುಕತೆ ಈಗ ಇಲ್ಲವಾಗಿದೆ. ದೂರವಿರುವ ಕಾರಣ ಇಬ್ಬರ ಭೇಟಿಯೂ ಅಷ್ಟಕ್ಕಷ್ಟೆ. ಸಂಪರ್ಕ ಕೊಂಡಿ ಅಂತ ಇದ್ದದ್ದು ಮೊಬೈಲು. ಮೊದಲಾದರೆ ಹಗಲು ರಾತ್ರಿ ಎನ್ನದೆ ಬರೀ ಮಾತಿನಲ್ಲೇ ಮುಳುಗಿದ್ದ ಜೋಡಿಯದು. ಈಗ ಇಬ್ಬರ ನಡುವೆ ಬರೀ ನೀರವ ಮೌನ.

ಸ್ನೇಹಿತನ ಈ ಬದಲಾದ ವರ್ತನೆಯನ್ನು ನೋಡಿ ಹಾಸ್ಟೆಲಿನಲ್ಲಿದ್ದ ಹತ್ತಿರದ ಗೆಳೆಯನಿಗೂ ದಿಗಿಲು. ಯಾವಾಗಲೂ ಅವನ ಕೋಣೆಯ ಮುಚ್ಚಿದ ಕೋಣೆಯ ಸಂದಿಯಿಂದ ಕೇಳಿ ಬರುತ್ತಿದ್ದ ಕುಟು ಕುಟು ಶಬ್ದ ಬೇರೆ. ಮೊದಲೇ ಅವನ ಪ್ರಿಯತಮೆಯ ಜೊತೆ ಮಾತುಕತೆ ಬೇರೆ ಮೊದಲಿದ್ದ ಹಾಗೆ ಇಲ್ಲ. ಪ್ರಾಣ ಸ್ನೇಹಿತನ ರೂಮಿನಿಂದ ಕೇಳಿ ಬರುತ್ತಿದ್ದ ಆ ಕುಟು ಕುಟು ಶಬ್ಧಕ್ಕೆ ಕಾರಣ ಕಂಡು ಹಿಡಿಯಲೇಬೇಕೆಂದು ಇವನು ಪಣ ತೊಟ್ಟ. ಎಷ್ಟೇ ಪ್ರಯತ್ನಪಟ್ಟರೂ ಅ ಶಬ್ಧದ ರಹಸ್ಯ ಮಾತ್ರ ಪತ್ತೆ ಹಚ್ಚಲು ಅವನಿಗೆ ಸಾಧ್ಯವಾಗಲೇ ಇಲ್ಲ. ಕೊನೆಗೆ ತಲೆಕೆಡಿಸಿಕೊಂಡು ಸಾಕಾಗಿ ಅವನನ್ನೇ ಕೇಳಬೇಕೆಂದು ನಿರ್ಧಾರ ಮಾಡಿದ. ಅವರಿಬ್ಬರ ಸಂಭಾಷಣೆ ಈ ಕೆಳಕಂಡಂತಿದೆ.

ಗೆಳೆಯಾ ನಿನ್ನ ಒಂದು ಮಾತು ಕೇಳಬಹುದಾ?.

ಅದೇನು ಕೇಳು ಪರ್ವಾಗಿಲ್ಲ.

ನೀನು ನಿನ್ನ ಹುಡುಗಿ ನಡುವೆ ಏನಾದ್ರು ಮನಸ್ತಾಪ ಆಯ್ತಾ? ನಾನು ಹೀಗೆ ಕೇಳಿದೆ ಅಂತ ಬೇಜಾರು ಮಾಡ್ಕೋಬೇಡ.

ಮನಸ್ತಾಪನಾ? ಅಂತದ್ದೇನು ಇಲ್ಲ ಮಾರಾಯ.

ಮತ್ತೆ ಯಾಕೆ ಇತ್ತೀಚೆಗೆ ಇಬ್ಬರ ನಡುವೆ ಮಾತುಕತೆ ಒಂದೂ ಇಲ್ಲ. ಯಾವಾಗ್ಲು ಒಬ್ಬನೇ ರೂಮಲ್ಲೇ ಕೂತಿರ್ತೀಯ. ಅದೂ ಬೇರೆ ಏನೋ ಕುಟ್ಟುತ್ತಾ ಇರೋ ಶಬ್ಧ ಬೇರೆ ಬರ್ತಾ ಇರುತ್ತೆ ನಿನ್ನ ರುಮಿನಿಂದ ಯಾಕೊ ನಿನ್ನ ನಡವಳಿಕೇನೆ ವಿಚಿತ್ರ ಆಗಿದೆ ಮಗಾ ಇತ್ತೀಚೆಗೆ ಅಂದ.

ಇದನ್ನು ಕೇಳಿದ ಕೂಡಲೇ ಸ್ನೇಹಿತನ ದುಃಖದ ಕಟ್ಟೆ ಒಡೆದು ಅಳುವುದಕ್ಕೆ ಶುರು ಮಾಡಿದ. ಎಷ್ಟು ಸಮಾಧಾನ ಮಾಡಿದರೂ ಗಂಟೆಯವರೆಗೆ ಅವನ ಅಳು ನಿಲ್ಲಲೇ ಇಲ್ಲ. ಕೊನೆಗೆ ಹಾಗೆ ಹೀಗೆ ಅವನನ್ನು ಸಮಾಧಾನ ಮಾಡಿ ಯಾಕೆ ಅತ್ತಿದ್ದು ನಾನೇನಾದ್ರು ತಪ್ಪು ಕೇಳಿದ್ನಾ ಗೆಳೆಯ ಅಂತ ಕೇಳಿದ.

ಅದಕ್ಕೆ ಇವನು ಇಲ್ಲ ಕಣೋ ನೀನು ಕೇಳಿದ್ರಲ್ಲಿ ಯಾವ ತಪ್ಪೂ ಇಲ್ಲ. ನನ್ನ ಮತ್ತು ನನ್ನ ಹುಡುಗಿ ನಡುವೆ ಯಾವ ಮನಸ್ತಾಪನೂ ಇಲ್ಲ ಆದರೆ ನನ್ನ ಮತ್ತು ಅವಳ ನಡುವಿನ ಪ್ರೀತಿ ಸಹಿಸದವರಿಂದ ಕಣೋ ಪ್ರಾಬ್ಲೆಮ್ಮು ಆಗಿರೋದು, ಅಂದ.

ಅದಕ್ಕೆ ಇವನು ಯಾಕೆ ಮಗಾ ಹುಡುಗಿ ಮನೆಯವರಿಗೆ ಏನಾದ್ರೂ ಈ ವಿಷಯ ಗೊತ್ತಾಯ್ತ ಹೇಗೆ ಅಂತ ಕೇಳಲಾಗಿ.

ಇಲ್ಲ ಅವಳ ಮತ್ತು ನನ್ನ ಮನೆಯವರಿಂದ ಯಾವುದೇ ಪ್ರಾಬ್ಲಮ್ಮು ಇಲ್ಲ ಮಗಾ. ಇದಕ್ಕೆಲ್ಲಾ ಕಾರಣ ಅಂದ್ರೆ ನೆಟ್‌ವರ್ಕ್‌ನೋರು ಅಂದ. ಇನ್ನೊಬ್ಬನಿಗೆ ಆಶ್ಚರ್ಯ "ಏನು ನೆಟ್‌ವರ್ಕ್‌ನೋರಿಂದ ಪ್ರಾಬ್ಲೆಮ್ಮ, ಏನಾಯ್ತು" ಅಂತ ಆಶ್ಚರ್ಯದಿಂದ ಕೇಳಿದ.

ಹೌದು ಕಣೋ ಇತ್ತೀಚೆಗೆ ಕಾಲ್‌ರೇಟ್ ಬೇರೆ ಜಾಸ್ತಿ ಮಾಡಿಬಿಟ್ಟಿದಾರೆ ಮೊದಲು ಇದ್ದ ಹತ್ತು ಪೈಸೆಯ ಟಾರಿಫ್ ಈಗ ಇಲ್ಲ, ಅದಕ್ಕೇ ಮೊದಲಿನ ಹಾಗೆ ಈಗ ಕಾಲ್ ಮಾಡಿ ಮಾತಾಡೋಕೆ ಆಗ್ತಾ ಇಲ್ಲ" ಅಂದಿಂದು ಕೇಳಿ ಕುತೂಹಲದಿಂದ ಕುದಿಯುತ್ತಿದ್ದವನಿಗೆ ತಲೆ ತಿರುಗೋದೊಂದೆ ಬಾಕಿ, ಆದರು ಸಾವರಿಸಿಕೊಂಡು "ಮತ್ತೆ ಯಾಕೆ ನಿನ್ನ ರೂಮಿನಿಂದ ಕುಟು ಕುಟು ಅಂತಾ ಯಾವಾಗ್ಲು ಶಬ್ಧ ಕೇಳುತ್ತಾ ಇರುತ್ತೆ" ಅಂತ ಕೇಳಲಾಗಿ.

ಅದಾ ಮಗಾ ಕಾಲ್‌ರೇಟ್ ಜಾಸ್ತಿ ಆದಮೇಲೆ ಇಬ್ಬರೂ ಮಾತಾಡಿಕೊಂಡು ಮೆಸೇಜ್ ಆಫರ್ ಹಾಕಿಸಿಕೊಂಡಿದೀವಿ ಅದೂ ಬೇರೆ ನಂದು ನೋಕಿಯ ಡಬ್ಬಲ್ ಒನ್ ಡಬ್ಬಲ್ ಝೀರೋ ಸೆಟ್ ಅಲ್ವ ಮೆಸೇಜ್ ಟೈಪ್ ಮಾಡಬೇಕಾದ್ರೆ ಆ ಶಬ್ಧ ಬರೋದು ಅಂತ ಅವನು ಹೇಳಿದ್ದು ಕೇಳಿ, ಏನೋ ಸೀಕ್ರೆಟ್ ಇರಬಹುದು ಅಂತ ಕಾಯುತ್ತಿದ್ದ ಇನ್ನೊಬ್ಬನಿಗೆ ನಿಮ್ಮ ರೀತಿಯೇ ಭ್ರಮ ನಿರಸನ ಆಗಿದ್ದಂತೂ ಸುಳ್ಳಲ್ಲ.

ಓದು ಕಲಿತದ್ದು

ಇವತ್ತು ನನಗೆ ಅತ್ಯಂತ ಖುಶಿ ಕೊಡುವಂತಹ ದಿನ. ತುಂಬ ದಿನದಿಂದ ಹುಡುಕುತಿದ್ದ ಎ.ಆರ್ ಕೃಷ್ಣಶಾಸ್ತ್ರಿ’ಗಳ ’ವಚನ ಭಾರತ’ ಬೀದಿ ಬದಿಯ ಪುಸ್ತಕದಂಗಡಿಯಲ್ಲಿ ೫೦ರೂ’ಗೆ ಸಿಕ್ತು. ನಾನು ಐದನೇ ತರಗತಿಯಲ್ಲಿದ್ದಾಗ ಮೊದಲನೇ ಬಾರಿ ಓದಿ ಮುಗಿಸಿದ್ದ ಪುಸ್ತಕವದು. ಎಷ್ಟು ಬಾರಿ ಓದಿದರೂ ಕೂಡ ಮಹಾಭಾರತ ಹೊಸತೆಂಬಂತೆ ಕಣ್ಣೆದುರು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಅದರಲ್ಲಿರೋ ಶಬ್ದಗಳ ಎಫೆಕ್ಟು ಅಂಥದ್ದು. ಆದಿ ಪರ್ವದಿಂದ ಸ್ವರ್ಗಾರೋಹಣ ಪರ್ವದವರೆಗೂ ಒಂದೇ ಗುಕ್ಕಿಗೆ ಮುಗಿಸಬಹುದಾದ ೩೬೮ ಪುಟಗಳ ಈ ಪುಸ್ತಕವೇ ನನಗೆ ಕನ್ನಡ ಪುಸ್ತಕಗಳನ್ನು ಓದುವ ಕಿಚ್ಚು ಹಚ್ಚಿದ್ದು. ನಂತರ ನೆಚ್ಚಿನ ತೇಜಸ್ವಿಯಿಂದ ಮುಂದುವರೆದು ಪಿ.ಯು.ಸಿ’ಗೆ ಬರುವಷ್ಟರಲ್ಲಿ ಭೈರಪ್ಪ, ಕುವೆಂಪು, ಕಾರಂತ’ರ ಪುಸ್ತಕಗಳೆಲ್ಲವೂ ನನ್ನಿಂದ ಓದಿಸಿಕೊಂಡಿದ್ದವು. ಕಥೆ ಕಾದಂಬರಿ ಹುಚ್ಚು ಎಷ್ಟರ ಮಟ್ಟಿಗೆ ಹತ್ತಿತ್ತು ಅಂದರೆ ನನ್ನಪ್ಪ ಟೆಕ್ಸ್ಟ್ ಬುಕ್ ಓದುತ್ತೀಯೋ ಇಲ್ಲೋ ಅಂತ ಬಾಸುಂಡೆಗಳ ಸುರಿಮಳೆಗೈದಿದ್ದರು. ಆದರೂ ಕದ್ದು ಮುಚ್ಚಿ ಟೆಕ್ಸ್ಟ್ ಬುಕ್ ಒಳಗಡೆ ಕಾದಂಬರಿ ಅಡಗಿಸಿ ಇಟ್ಟುಕೊಂಡು ಓದುತ್ತಿದ್ದೆ. ಪಿ.ಯು.ಸಿ ರಿಜೆಲ್ಟ್ ಬಂದಾಗ ಬೇರೆಯವರೆಲ್ಲಾ ಪ್ರಪಂಚ ತಲೆ ಮೇಲೆ ಬಿದ್ದವರ ಥರ ಓಡಾಡ್ತಾ ಇದ್ದರೆ ನಾನು ತೇಜಸ್ವಿಯವರ ’ಅಣ್ಣನ ನೆನಪು’ ಪುಸ್ತಕವನ್ನು ಅಟ್ಟದ ಮೇಲೆ ಕುಳಿತು ಓದಿದ್ದೆ.
ಪಿ.ಯು.ಸಿ’ಯಿಂದ ದೊಡ್ಡ ಪಾಠ ಕಲಿತು ಹೀಗಾದರೆ ಉದ್ಧಾರ ಆಗಲ್ಲ ಅಂತ ನನಗೇ ಅನ್ನಿಸಿ ಸಾಹಿತ್ಯ ಓದುವ ಹುಚ್ಚನ್ನು ಎಲ್ಲರಿಗೂ ಆಶ್ಚರ್ಯವಾಗೋ ರೀತಿ ಬಿಟ್ಟು ಬಿಟ್ಟಿದ್ದೆ. ಆಮೇಲೆ ಬಿ.ಎಸ್ಸಿ ಅದಾದ ಮೇಲೆ ಎಮ್.ಬಿ,ಎ, ರಿಸೆಶನ್ನು, ಕೆಲಸ ಅಂತ ತಲೆ ಕೆಡಿಸಿಕೊಂಡು ಸಾಹಿತ್ಯ ಮರೆತೇ ಹೋಗಿತ್ತು. ಇಂತಹ ಸಂದರ್ಭದಲ್ಲಿ ಮತ್ತೆ ಓದುವ ಆಭ್ಯಾಸ ಅದೇ ’ವಚನ ಭಾರತ’ದಿಂದಲೇ ಶುರು ಮಾಡಬೇಕು ಅನ್ನುವ ಕೊರೆತ ಮನಸಿನಲ್ಲಿ ಇದ್ದೇ ಇತ್ತು. ಪುಸ್ತಕ ಮಳಿಗೆಗಳನ್ನೆಲ್ಲಾ ಜಾಲಾಡಿದ್ದರೂ ಈ ಪುಸ್ತಕ ಮಾತ್ರ ಸಿಕ್ಕಿರಲಿಲ್ಲ. ಅಂತದ್ದರಲ್ಲಿ ತಮ್ಮನೊಂದಿಗೆ ಸಂಜೆ ಹೊರಗಡೆ ಹೋದಾಗ ಬೀದಿ ಬದಿಯಲ್ಲಿ ಸಿಗಬೇಕೇ. ಸ್ವರ್ಗ ಸಿಕ್ಕಷ್ಟೇ ಸಂತೋಷವಾಗಿ ಒಳಗೊಳಗೇ ಮನಸ್ಸು ಕುಣಿದಾಡಿ ಗ್ಯಾಂಗ್ನಂ ಡಾನ್ಸ್ ಮಾಡಿತು.

ಭಾನುವಾರ, ಮಾರ್ಚ್ 24, 2013

ಅವಳು ಕೇಳಿದ್ದು-ಇವನು ಕೊಟ್ಟಿದ್ದು



ಅವಳೊಮ್ಮೆ ತನಗೆ ಬಂಗಾರದ್ದೇನಾದರು ಕೊಡಿಸಿ ಅಂತ ಕೇಳಿದಳು ಅದಕ್ಕಿವನು ತನ್ನ ಬಂಗಾರದಂತ ಹೃದಯವನ್ನೇ ನಿನಗೆ ಕೊಟ್ಟಾಗಿದೆಯಲ್ಲೇ ಅಂದ.
ಮತ್ತೊಂದು ದಿನ ಮುತ್ತಿನ ಓಲೆ ನೋಡಿ ಅಂತಹದ್ದೇ ನನಗೆ ಬೇಕು ಕೊಡಿಸಿ ಅಂದಳು, ಒಂದು ಸಿಹಿ ಮುತ್ತು ಕೊಟ್ಟು ಇವನು ಮುಗುಳ್ನಗೆ ಸೂಸಿದ್ದ.
ವಿಮಾನದಲ್ಲಿ ಕರ್ಕೊಂಡು ಹೋಗಿ ಒಮ್ಮೆ ಅಂತ ಕೇಳಿದ್ದ ಅವಳನ್ನು ವಿಮಾನಗಳು ತಲೆ ಮೇಲೆಯೇ ಇಳಿದಂತೆ, ಹಾರುವಂತೆ ಭಾಸವಾಗುವ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪದ ಜಾಗದ ಹೈವೇಯಲ್ಲಿ ಗಾಡಿ ನಿಲ್ಲಿಸಿ ಹತ್ತಿರದಲ್ಲೇ ಹಾರಾಡುವ ವಿಮಾನಗಳನ್ನು ತೋರಿಸಿದ್ದ.
ಸ್ವರ್ಗವನ್ನು ನೋಡಬೇಕೆಂದವಳಿಗೆ ನಾಲ್ಕು ಗೋಡೆಯ ಮಧ್ಯೆ ಶಯನ ಗೃಹದಲ್ಲೇ ಸ್ವರ್ಗವನ್ನು ಧರೆಗಿಳಿಸಿದ್ದ.
ಲೇಟೆಸ್ಟ್ ಡಿಸೈನರ್ ವೇರ್ ಕೊಡಿಸಿ ಅಂದವಳಿಗೆ ಹುಟ್ಟುಡುಗೆಯನ್ನೇ ಮೈ ತುಂಬಾ ಉಡಿಸಿ, ಅವಳ ಪ್ರತಿಬಿಂಬವನ್ನು ಕನ್ನಡಿಯಲ್ಲಿ ತೋರಿಸಿ ಚಂದ ಕಾಣ್ತಿದಿಯ ಕಣೇ ಅಂತ ಅವಳನ್ನು ಹೊಗಳಿ ಸಂತೋಷಪಟ್ಟಿದ್ದ.
ಮಳೆಯಲ್ಲಿ ನೆನೆಯೋ ಆಸೆಯಾಗ್ತಿದೆ ಅಂತ ಅವಳು ಹೊರಗೆ ಬರುತ್ತಿದ್ದ ಮಳೆ ತೋರಿಸಿ ಹೇಳಿದಾಗ ಮಳೆಯಲ್ಲಿ ನೆನೆದರೆ ಆರೋಗ್ಯ ಕೆಡುತ್ತೆ ಬಂಗಾರಿ ಅಂತ ತನ್ನ ಪ್ರೀತಿಯ ಮಳೆಯಲ್ಲೇ ತೋಯಿಸಿ ತೊಪ್ಪೆಯಾಗಿರಿಸಿದ್ದ.

ಒಂದು ದಿನ ಅವಳು ಅವನಿಗೆ ನಿನ್ನ ಪ್ರೀತಿ ಬರೀ ಬೂಟಾಟಿಕೆ, ನಾನು ಕೇಳಿದ ಒಂದನ್ನೂ ಇದುವರೆಗೆ ನೀನು ಕೊಡಿಸಲೇ ಇಲ್ಲ. ನಾನು ಕೇಳಿದ್ದೊಂದಾದರೆ ನೀನು ಮಾಡೋದೇ ಒಂದು ಅಂತ ಚುಚ್ಚಿದಳು.

ಅವಳು ಕೇಳಿದ್ದಕ್ಕಿಂತ ಹೆಚ್ಚಿನದನ್ನೇ ಕೊಟ್ಟಿದ್ದೇನೆ, ತಾನು ತಪ್ಪಿದ್ದಾದ್ರು ಎಲ್ಲಿ ಅಂತ ಯೋಚಿಸಿ ಯೋಚಿಸಿ ಖಿನ್ನನಾದ.

ಅಂದಿನಿಂದ ಅವನು ತನ್ನಾಕೆಯ ಆಸೆಗಳನ್ನು ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸತೊಡಗಿದ. ತನ್ನ ಆಸೆಗಳನ್ನು ಸಂಪೂರ್ಣವಾಗಿ ಅವಳಿಗಾಗಿ ಕೊಂದುಕೊಂಡ.

ಅವಳಿಗೆ ತನ್ನ ಗಂಡ ತುಂಬಾ ಯಾಂತ್ರಿಕನಾಗಿದ್ದಾನೆ ಅನ್ನಿಸತೊಡಗಿದೆ. ಕೇಳಿದ್ದೆಲ್ಲ ಕೊಡಿಸುತ್ತಿದ್ದರೂ ಕೂಡ ಅದರಲ್ಲಿ ಮುಖ್ಯವಾಗಿ ಇರಬೇಕಿದ್ದ ಪ್ರೀತಿಯ ಮಿಶ್ರಣವೇ ಮಾಯವಾಗಿದೆ.

ನೀನೇಕೆ ನನ್ನೊಂದಿಗೆ ಮಾತಾಡೋದೆ ಕಡಿಮೆ ಆಗಿದೆ ಅಂತ ಒತ್ತಾಯಪೂರ್ವಕವಾಗಿ ಅವನನ್ನು ಕೇಳಿದವಳಿಗೆ ತನ್ನ ಹೃದಯ ಬಡಿತ ಕೇಳಿಸಿ ಹೆದರಬೇಡ ಬದುಕಿದ್ದೇನೆ ಅಂದಿದ್ದ.

ಅವನ ಬದಲಾದ ವರ್ತನೆಗಳು ಅವಳಿಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ. ಅವನನ್ನು ಮೊದಲಿನ ಸ್ಥಿತಿಗೆ ತರುವುದು ಹೇಗೆ ಎಂದು ಯೋಚಿಸಿ ಕೃಶಳಾಗುತ್ತಾ ಸಾಗಿದ್ದಾಳೆ.

ಅವನೂ ಕೂಡ ಅವಳು ಕೇಳಿದ್ದೆಲ್ಲಾ ಕೊಡಿಸಿದರೂ ಹೀಗೇಕೆ ಆಗುತ್ತಿದ್ದಾಳೆ ಎನ್ನುವ ಉತ್ತರ ಗೊತ್ತಾಗದೆ ಇಂಚಿಂಚಾಗಿ ತನ್ನನ್ನು ತಾನು ಕೊಲೆ ಮಾಡುತ್ತಾ ಸಾಗಿದ್ದಾನೆ.

ಇಬ್ಬರ ಮಧ್ಯೆ ಗೋಡೆಯಂತು ದಟ್ಟವಾಗಿ ಬೆಳೆದಾಗಿದೆ. ತಮ್ಮ ನಡುವೆ ಆದ ತಪ್ಪಾದರೂ ಏನು ಎನ್ನುವುದು ಇಬ್ಬರಿಗೂ ಇದುವರೆಗು ತಿಳಿದಿಲ್ಲ.    

ಬುಧವಾರ, ಮಾರ್ಚ್ 20, 2013

ನಂದಿ ಬೆಟ್ಟವೂ, ಇನ್ಶ್ಯೂರೆನ್ಸೂ

ಸ್ವಲ್ಪ ದಿನಗಳ ಹಿಂದೆ ಏನೋ ಕೆಲಸದ ಮೇಲೆ ದೇವನಹಳ್ಳಿಗೆ ಹೋಗಿದ್ದೆ. ಸ್ವಲ್ಪ ಸಮಯ ಉಳಿದಿದ್ದರಿಂದ ಅಲ್ಲೇ ಹತ್ತಿರದ ನಂದಿ ಬೆಟ್ಟ ನೋಡೋಣ ಅಂತ ಅಂದ್ಕೊಂಡು ಹೊರಟೆ. ಬೆಟ್ಟದ ತುದಿ ತಲುಪಿದಾಗ ಮಟ ಮಟ ಮದ್ಯಾಹ್ನ ಹನ್ನೆರಡಾಗಿತ್ತು. ಟಿಕೆಟ್ ಕೌಂಟರಿಗೆ ಹೋಗಿ ಒಂದು ಟಿಕೆಟ್ ಕೊಡಿ ಅಂತ ಕೇಳಿದೆ. ಟಿಕೆಟ್ ಕೊಡೋನು ನಖಶಿಖಾಂತ ಮೇಲಿಂದ ಕೆಳಗೆ ನೋಡಿ ’ಏನ್ ಪ್ರಾಬ್ಲಮ್ಮು ಸ್ವಾಮಿ ಸಂಬಳ ಸಾಲ್ತಾ ಇಲ್ವ’ ಅಂತ ಕೊಂಕು ನಗೆ ಬೀರಿ ಕೇಳಿದ. ಅವನು ಯಾಕೆ ಆ ರೀತಿ ಕೇಳಿದ್ದು ಅಂತ ಅರ್ಥ ಆಗದೆ ’ಏನೋ ಪರ್ವಾಗಿಲ್ಲ ಕಣ್ರೀ ಬರೋ ಸಂಬಳದಲ್ಲಿ ಡೀಸೆಂಟ್ ಆಗಿ ಜೀವನ ಮಾಡಬಹುದು’ ಅಂತ ಹೇಳಿ ಟಿಕೆಟ್ ಇಸ್ಕೊಂಡು ಗೇಟ್ ಹತ್ರ ಹೋದೆ. ಟಿಕೆಟ್ ಕೇಳಿದ ಸೆಕ್ಯುರಿಟಿಗೆ ತಗೊಂಡಿದ್ದ ಟಿಕೆಟ್ ತೋರಿಸಿ ಒಳಗೆ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಏನು ಒಬ್ರೇನಾ? ಅಂತ ನಾನೇನೋ ದೊಡ್ಡ ತಪ್ಪು ಮಾಡಿರೋ ಥರ ಕೇಳ್ದ. ಹೌದು ಸ್ವಾಮಿ ನಾನು ಒಬ್ಬನೇ ಬಂದಿರೋದು ಅಂತ ಪ್ರಶ್ನಾರ್ಥಕವಾಗಿ ಅವನ ಕಡೆ ನೋಡಿದೆ. ಅದಕ್ಕೆ ಅವನು ’ಹಾಗಾದ್ರೆ ವಾಪಸ್ಸು ಹೋಗಿ, ಒಳಗೆ ಬಿಡೋದಿಲ್ಲ’ ಅಂದ. ಅವರ ವಿಚಿತ್ರ ನಡವಳಿಕೆಯನ್ನು ಅದುವರೆಗೂ ನೋಡಿದ ನಾನು ’ಯಾಕ್ರಿ ಬಿಡೋದಿಲ್ಲ, ನಾನೇನು ಟಿಕೆಟ್ ತಗೊಂಡಿಲ್ವ’ ಅಂತ ಟಿಕೆಟ್ ಅನ್ನು ಅವನ ಮುಖಕ್ಕೆ ಹಿಡಿದೆ. ಅದಕ್ಕೆ ಅವನು ’ನೋಡ್ರಿ ಇಲ್ಲಿ ಟಿಕೆಟ್ಟಿನ ಪ್ರಶ್ನೆ ಅಲ್ಲ ಇರೋದು, ನಾವು ಆತ್ಮಹತ್ಯೆ ಮಾಡಿಕೊಳ್ಳೋಕೆ ಬಂದವರನ್ನು ಒಳಗೆ ಬಿಡೋದಿಲ್ಲ’ ಅಂತ ಗಬ್ಬರ್ ಸಿಂಗ್ ಸ್ಟೈಲಿನಲ್ಲಿ ಹೇಳಿದ. ಅವನ ಮಾತನ್ನು ಕೇಳಿದ ನಾನು ಕ್ಷಣ ಕಾಲ ದಂಗಾದೆ. ’ಏನು ಆತ್ಮಹತ್ಯೆ ಮಾಡಿಕೊಳ್ಳೋದ ನಾನು’ ಅಂತ ಗಾಬರಿಯಿಂದ ಹೇಳಿದೆ. ಅದಕ್ಕೆ ಅವನು ’ಹೌದ್ರಿ ಇಲ್ಲಿಗೆ ಒಬ್ಬೊಬ್ಬರೆ ಬರೋದೇ ಆತ್ಮಹತ್ಯೆ ಮಾಡಿಕೊಳ್ಳೋಕೆ’ ಅಂತ ಅಷ್ಟೇ ದೃಢವಾಗಿ ಹೇಳಿದ. ’ನನ್ನನ್ನು ನೋಡಿದ್ರೆ ನಿಮಗೆ ಸೂಸೈಡ್ ಮಾಡಿಕೊಳ್ಳೋಕೆ ಬಂದವರ ಥರ ಕಾಣ್ತೀನೇನ್ರಿ’ ಅಂದದ್ದಕ್ಕೆ. ’ಹತ್ತು ದಿವಸದ ಹಿಂದೆ ನಿಮಗಿಂತ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡಿದ್ದವನು ಬಂದಿದ್ದ ಸ್ವಾಮಿ, ಸಾಫ್ಟ್ ವೇರ್ ಎಂಜಿನೀಯರಂತೆ. ಅರವತ್ತು ಸಾವಿರ ಸಂಬಳ ತಗೋತೀನಿ ನಾನು ನಾನ್ಯಾಕೆ ಸಾಯಲಿ ಅಂತ ವಾದಿ ಮಾಡಿ ಒಳಗೆ ಹೋದೋನು ಟಿಪ್ಪು ಡ್ರಾಪಿನಿಂದ ಬಿದ್ದು ಸತ್ತಿದಾನೆ, ಇದಕ್ಕೆ ಏನ್ಹೇಳ್ತೀರಿ’ ಅನ್ನುತ್ತಾ ಸತ್ತವನು ನಿಲ್ಲಿಸಿದ್ದ ಅನಾಥ ಬೈಕನ್ನು ತೋರಿಸುತ್ತ ಹೇಳಿದ. ’ರೀ ಸ್ವಾಮಿ ಸಾಯೋಕೆ ಇಲ್ಲಿಗೇ ಬರಬೇಕೇನ್ರಿ, ಸಾಯೋರು ಎಲ್ಲಾದ್ರು ಸಾಯ್ತಾರೆ….. ನಾನು ಕೆಳ ತಿಂಗಳಿನ ಹಿಂದೆ ಅಷ್ಟೆ ಮದುವೆ ಆಗಿರೋದು ಜೀವನದಲ್ಲಿ ಇನ್ನು ಮಾಡಬೇಕಾಗಿರೋದು ಬೇಕಾದಷ್ಟು ಇದೆ’ ಅವನನ್ನು ಖಂಡಿಸುತ್ತಾ ಹೇಳಿದೆ. ಅದಕ್ಕೆ ಅವನು ’ಏನು ರೀಸೆಂಟಾಗಿ ಮದುವೆ ಆಗಿದೀರಾ? ಹಾಗಾದ್ರೆ ಇದಕ್ಕಿಂತ ಬೇರೆ ಕಾರಣ ಬೇಕಾ ಸಾಯೋಕೆ’ ಅಂತ ಹೇಳಬೇಕೆ?. ಇನ್ನು ಇವನ ಹತ್ರ ಮಾತಾಡೋದು ವೇಷ್ಟು ಅನ್ನಿಸಿದ್ರು ಕೂಡ ಕೊನೆಯ ಅಸ್ತ್ರವಾಗಿ ’ನೀವು ಕೂಡ ಮದುವೆ ಆಗಿರೋರೆ ಅಲ್ವ ಹಾಗಂತ ನೀವು ಸೂಸೈಡ್ ಮಾಡಿಕೊಂಡಿದೀರಾ’ ಅಂತ ಕೇಳ್ದೆ. ’ಹೋಗಿ, ಹೋಗಿ ಸ್ವಾಮಿ ನಿಮ್ಮ ಕೆಲ್ಸ ನೋಡ್ಕೊಳ್ಳಿ ನಾನು ನನ್ನ ಹೆಂಡ್ತಿ ಹತ್ರ ಪ್ರತಿ ದಿನ ಸತ್ತು ಬದುಕ್ತಾ ಇದೀನಿ ನನ್ನ ಕಷ್ಟ ಯಾರಿಗೆ ಹೇಳಲಿ’ ಅಂದ. ನನ್ನ ಹೆಂಡತಿ ನನ್ನ ಜೊತೆ ಆ ಕ್ಷಣ ಇರದಿದ್ದಕ್ಕೆ ಬೇಜಾರು ಆದ್ರು ಕೂಡ ಹಿಂತಿರುಗಿಸಿದ ಟಿಕೆಟ್ಟಿನ ದುಡ್ಡು ಪಡೆದುಕೊಂಡು ಹೋದ ದಾರಿಯಲ್ಲೇ ಬೆಂಗಳೂರಿಗೆ ವಾಪಸ್ಸು ಬಂದಿದ್ದೆ.

ನಾನು ನಂದಿಬೆಟ್ಟಕ್ಕೆ ಹೋಗಿದ್ದ ಗಳಿಗೆ ಸರಿ ಇರಲಿಲ್ಲವೇನೋ ಅಂತ ಅನ್ಸುತ್ತೆ. ಯಾಕಪ್ಪ ಅಂದ್ರೆ ಮೊನ್ನೆ ನನ್ನ ಸ್ನೇಹಿತ ಒಬ್ಬ ಕಾಲ್ ಮಾಡಿದ್ದ. ಎಂಬಿಎ ಮುಗಿದ ಮೇಲೆ ಎಲ್ಲರೂ ಒಂದಲ್ಲ ಒಂದು ರೀತಿ ಟಚ್ಚಿನಲ್ಲಿ ಇದ್ರೂ ಈ ಆಸಾಮಿ ಮಾತ್ರ ಪತ್ತೆನೇ ಇರ್ಲಿಲ್ಲ. ಹೀಗೆ ಫ್ರೆಂಡ್ಸ್ ಜೊತೆ ಮಾತಾಡ್ತಾ ಇದ್ದಾಗ ಇವನು ಯಾವ್ದೋ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಿದಾನೆ ಅಂತ ಹೇಳಿದ್ರು. ಅವನ ಹೆಸರಿನಲ್ಲೇ ಮೂರ್ನಾಲ್ಕು ನಂಬರುಗಳು ಸೇವ್ ಆಗಿದ್ರು ಒಂದು ನಂಬರ್ ಕೂಡ ವರ್ಕ್ ಆಗ್ತಾ ಇರ್ಲಿಲ್ಲ ಕೊನೆಗೆ ಅವನ ಅಸ್ತಿತ್ವವನ್ನೇ ಮರೆತುಬಿಟ್ಟಿದ್ದೆ. ಇಂತಹ ಆಸಾಮಿ ಮೂರು ವರ್ಷಗಳ ಬಳಿಕ ಕಾಲ್ ಮಾಡಿದ್ದರಿಂದ ಆಶ್ಚರ್ಯದ ಜೊತೆ ಗಾಬರಿಯೂ ಆಗಿತ್ತು ಯಾಕಂದ್ರೆ ಏನೂ ವಿಷಯ ಇಲ್ಲ ಅಂದ್ರೆ ಕಾಲ್ ಮಾಡೋ ಮನುಷ್ಯ ಅಲ್ವೇ ಅಲ್ಲ ಅವನು. ಅವನ ಧ್ವನಿ ಮಾತ್ರ ಮೂರು ವರ್ಷಗಳ ಬಳಿಕವೂ ಇನ್ನೂ ಹಾಗೇ ಇದ್ದಿದ್ರಿಂದ ನಾನು ಕೂಡಲೇ ಪತ್ತೆ ಹಚ್ಚಿ “ಏನೋ ಮಗಾ ಇಷ್ಟು ವರ್ಷ ಆದ ಮೇಲೆ ಕಾಲ್ ಮಾಡಿದೀಯ ಎಲ್ಲಿದೀಯ, ಹೇಗಿದೀಯ” ಅಂತ ಕುಶಲೋಪರಿ ಪ್ರಶ್ನೆ ಬಿಸಾಕಿ ಉತ್ತರಕ್ಕಾಗಿ ಕಾದು ನಿಂತೆ. “ನಂದು ಬಿಟ್ಟಾಕು ಸಿಸ್ಯಾ ಏನೋ ವಿಚಾರ ಕೇಳ್ದೆ ನಿಜಾನ?” ಅಂತ ಕೇಳ್ದ. ನಾನು ಮದುವೆ ಆಗಿರೋ ವಿಚಾರ ಇರಬಹುದು ಅಂತ “ಸಾರಿ ಮಗಾ ನಿನ್ನ ಮೊಬೈಲ್ ನಂಬರ್ ಇರ್ಲಿಲ್ಲ ಅದಕ್ಕೆ ನನ್ನ ಮದುವೆಗೆ ಕರಿಯೋಕೆ ಅಗಿರ್ಲಿಲ್ಲ” ಅಂದೆ. “ಹಳೇ ವಿಚಾರ ಹೇಳ್ಬೇಡ ನಂಗೆ, ನೀನು ಸೂಸೈಡ್ ಮಾಡ್ಕೊಳ್ಳೋಕೆ ನಂದಿಬೆಟ್ಟಕ್ಕೆ ಹೋಗಿದ್ಯಂತೆ ಹೌದಾ? ಕೇಳಿ ಶಾಕ್ ಆಯ್ತು ಅದಕ್ಕೆ ಕಾಲ್ ಮಾಡಿದ್ದು” ಅಂತ ಹೇಳ್ದ. ನನಗೋ ಇದ್ಯಾವ ಹೊಸ ಸಮಸ್ಯೆ ಸಿವನೇ ಅಂದ್ಕೊಂಡೆ ಆದ್ರೆ ಇನ್ನೂ ದೊಡ್ಡ ಪೀಕಲಾಟ ಶುರು ಆಗಿದ್ದು ಆಮೇಲೆ. “ಇಲ್ಲ ಕಣಪ್ಪಾ ನಾನೊಬ್ನೇ ನೋಡೋಣ ಅಂತಾ ಹೋಗಿದ್ದೆ, ಏನೋ ಮಿಸ್ ಅಂಡರ್ಸ್ಟಾಂಡಿಂಗು ಒಳಗೆ ಬಿಡಲಿಲ್ಲ” ಅಂತ ಕೂಲಾಗೇ ಹೇಳಿದೆ. “ಇಷ್ಟು ದೊಡ್ಡ ವಿಶ್ಯಾ ಎಷ್ಟು ನಾರ್ಮಲ್ಲಾಗಿ ಹೇಳ್ತಾ ಇದೀಯಾ, ಮಗಾ ನಾನು ಅರ್ಜೆಂಟಾಗಿ ನಿನ್ನ ಮೀಟ್ ಮಾಡ್ಬೇಕು ಎಲ್ಲಿಗೆ ಬರ್ಲಿ ಹೇಳು ನಾನು ನಿನ್ನ ಅಷ್ಟು ಈಜಿಯಾಗಿ ಸಾಯೋಕೆ ಬಿಡೊಲ್ಲ” ಅಂದ. ನಾನು “ಥೂ ನಿನ್ನ ತುಂಬಾ ದಿವಸದ ಮೇಲೆ ಕಾಲ್ ಮಾಡಿ ಬರೀ ಅಪಶಕುನದ ಮಾತಾಡ್ತಿಯಲ್ಲೋ ಶುನಕ ಮುಂಡೇದೆ” ಅಂತ ಥೇಟ್ ಬ್ರಾಹ್ಮಣರ ಸ್ಟೈಲಿನಲ್ಲಿ ಬೈದು ಬಂದು ತಲೆ ತಿನ್ನೋದೇನು ಬೇಡ ಮಾರಾಯ ಅಂದ್ರೂ ಕೇಳದೆ ಬಂದು ನೋಡಲೇ ಬೇಕು ಅಂತ ಹಠ ಹಿಡಿದ. ಸ್ನೇಹಿತನಾದ ನನ್ನ ಮೇಲೆ ಎಷ್ಟು ಪ್ರೀತಿ ಇಟ್ಕೊಂಡಿದಾನಲ್ಲ ಇವನಂತಹ ಹಿತೈಶಿಯನ್ನು ಪಡೆದ ನಾನೇ ಧನ್ಯ ಅಂತ ಒಳಗೊಳಗೇ ಹೆಮ್ಮೆ ಪಟ್ಟು “ನಾಳೆ ಹನ್ನೆರಡರೊಳಗೆ ಆಫೀಸಿಗೆ ಬಾ ಮಾರಾಯ” ಅಂತ ಆಫೀಸಿನ ಅಡ್ರೆಸ್ಸು ಕೊಟ್ಟೆ.
ಮರುದಿನ ಹತ್ತಕ್ಕೆ “ನಿಮ್ಮನ್ನು ನೋಡಲು ಯಾರೋ ಬಂದಿದಾರೆ” ಅಂತ ಆಫೀಸ್ ಬಾಯ್ ಹೇಳಿದ್ದಕ್ಕೆ ನೋಡಲಾಗಿ ಆ ನನ್ನ ಸ್ನೇಹಿತನ ರೂಪದ ನಕ್ಷತ್ರಿಕ ಆಸೀನನಾಗಿದ್ದ. ಮೊದಲು ಬೆಂಗಳೂರು, ಟ್ರಾಫಿಕ್ಕು, ಹುಡುಗೀರು, ಕ್ಲಾಸ್ ಮೇಟ್ಸು ಅಂತ ಏನೇನೋ ಮಾತಾಡಿ ಕೊನೆಗೆ ಹೇಗಿದೆ ನಿನ್ನ ಲೈಫು ಅಂತ ಅವನು ನನ್ನನ್ನು ಕೇಳಿದ ಮೇಲೆ ಏನೋ ವಿಷಯಕ್ಕೆ ಪೀಠಿಕೆ ಹಾಕ್ತಾ ಇದಾನೆ ಇವನು ಅಂತ ನನಗೆ ಅನ್ನಿಸಿ “ಲೈಫು ಮದುವೆ ಆದ ಮೇಲೆ ಸೋಪರ್ರಾಗಿ, ಕಲರ್ ಫುಲ್ಲಾಗಿ ಇದೆ ಮಗಾ, ಐ ಯಾಮ್ ಜಷ್ಟ್ ಎಂಜಾಯಿಂಗ್ ಮೈ ಲೈಫ್ “ಅಂತ ಹೇಳಿದೆ. ಅದಕ್ಕೆ ಅವನು ಇಲ್ಲ ಕಣೋ ಸಮ್ ಥಿಂಗ್ ಈಸ್ ನಾಟ್ ಅಟ್ ಆಲ್ ರೈಟ್, ಇಲ್ಲ ಅಂದ್ರೆ ಸೂಸೈಡ್ ಮಾಡ್ಕೊಳ್ಳೋಕೆ ಹೋಗ್ತಾ ಇರ್ಲಿಲ್ಲ ನೀನು, ಅದು ಸರಿ ಯಾವುದಾದ್ರು ಇನ್ಶೂರೆನ್ಸ್ ಮಾಡಿಸಿದೀಯ ನೀನು” ಅಂದ. ಅಲ್ಲಿಗೆ ಇವನ ಉದ್ಧೇಶ ಏನು ಅನ್ನೋದು ನನಗೆ ಸ್ಪಷ್ಠವಾಗಿತ್ತು. “ಲೇ, ಸುತ್ತಿ ಬಳಸಿ ಮಾತಾಡ್ಬೇಡ, ಇನ್ಶ್ಯೂರೆನ್ಸ್ ಮಾಡ್ಸು ಅಂತ ಡೈರೆಕ್ಟಾಗಿ ಕೇಳು ಮಾರ್ಕೆಟಿಂಗ್ ಮಾಡೋವ್ರ ಹತ್ರನೇ ಇವೆಲ್ಲಾ ಟ್ರಿಕ್ಸ್ ಬ್ಯಾಡೋ ಸಿಸ್ಯಾ” ಅಂದೆ. “ಪುರು ನೀನು ತುಂಬಾ ಶಾರ್ಪ್ ಕಣೋ ನನ್ನ ಕಂಪ್ನಿದು ಒಂದು ಒಳ್ಳೆ ಇನ್ಶ್ಯೂರೆನ್ಸ್ ಪಾಲಿಸಿ ಪ್ಲಾನ್ ಇದೆ, ಒಂದು ಪಾಲಿಸಿ ಮಾಡ್ಸು ಮಗಾ ಅಟ್ ಲೀಸ್ಟ್ ಐದು ಲಕ್ಷದ್ದು ಆಮೇಲೆ ನೀನು ಹೇಗೆ ಬೇಕಾದ್ರು ಸಾಯಿ ಮಗಾ ನಿನ್ನ ನಂಬಿಕೊಂಡವ್ರಿಗೆ ತೊಂದ್ರೆ ಇರೊಲ್ಲ” ಅಂದ. ಅದೇನು ಹೇಳಪಾ ಪಾಲಿಸಿ ಪ್ಲಾನು, ನಾನು ಒಂದು ಪಾಲಿಸಿ ಮಾಡಿಸಬೇಕು ಅಂತ ಇದ್ದೆ” ಅಂದೆ. ಆಮೇಲೆ ಅವನು ಹೇಳಿದ್ದನ್ನು ಇದ್ದ ಹಾಗೆ ನಿಮ್ಮ ಮುಂದೆ ಇಡ್ತಾ ಇದೀನಿ, “ನೋಡು ಮಗಾ ನಿನಗೆ ಈಗೆ ೨೮ ವಯಸ್ಸು, ವರ್ಷಕ್ಕೆ ೨೪ ಸಾವಿರ ಕಟ್ಟುತ್ತಾ ಹೋಗು, ೨೦ ವರ್ಷದವರೆಗೂ ಕಟ್ಟಿದರೆ ಒಟ್ಟು ಮೊತ್ತದ ಜೊತೆಗೆ ೧೦% ಬಡ್ಡಿನೂ ಸಿಗುತ್ತೆ, ಇನ್ನೂ ಒಂದು ಬೆನಿಫಿಟ್ ಇದೆ ಕಣೋ, ನೀ ಮೊದಲನೇ ಕಂತು ಕಟ್ಟಿ ಮರುದಿನವೇ ಸಾಯಿ ಪರ್ವಾಗಿಲ್ಲ ಇಪ್ಪತ್ತು ವರ್ಷದ ಫುಲ್ ಅಮೌಂಟ್ ಒಟ್ಟಿಗೆ ಸಿಗುತ್ತೆ” ಅಂದ. “ಥೂ ನಿನ್ನ, ಬರೀ ಸಾಯೋದೇ ಮಾತಾಡ್ತೀಯಲ್ಲೋ, ಒಳ್ಳೇ ಮಾತು ಬರಲ್ವಾ ನಿನ್ನ ಬಾಯಲ್ಲಿ” ಅಂದೆ. ಅದಕ್ಕೆ ಅವನು “ಸಾರಿ ಕಣೋ ನಿನ್ನ ಮನಸ್ಸಿಗೆ ಬೇಜಾರಾಯ್ತು ಅನ್ಸುತ್ತೆ, ನೀನು ಸಾಯ್ಲಿಲ್ಲ ಅಂತನೇ ತಿಳ್ಕೋ, ಬರೀ ಕೈ ಅಥವಾ ಕಾಲು ಮುರೀತು ಅಂತ ತಿಳ್ಕೋ ನಿನಗೆ ಟೋಟಲ್ ದುಡ್ಡಿನಲ್ಲಿ ೪೦% ಸಿಗುತ್ತೆ ಮಗಾ, ಈ ಆಫರ್ ನಮ್ಮ ಕಂಪನೀಲಿ ಮಾತ್ರ ಇರೋದು” ಅಂತ ಏನೋ ದೊಡ್ಡ ಫೇವರ್ ಮಾಡ್ತಾ ಇರೋರ ಥರ ಪೋಸು ಕೊಡ್ತಾ ಹೇಳಿದ. ಆ ಕ್ಷಣದಲ್ಲಿ ಅವನು ನನ್ನ ಕಣ್ಣಿಗೆ ಕೈಗೆ ಇಷ್ಟು, ಕಾಲಿಗೆ ಇಷ್ಟು ಅಂತ ಮಾತಾಡೋ ಸುಪಾರಿ ಕಿಲ್ಲರ್ ಥರ ಕಂಡಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಕೊನೆಗೆ ಅವನು ಹೇಳಿದ ಒಂದು ಮಾತು ಕೇಳಿ ತುಂಬಾ ಉರಿದು ಹೋಯ್ತು, ಅದೇನು ಅಂದ್ರೆ “ಮಗಾ ಪಾಲಿಸಿ ಮಾಡಿಸಿದ ಮೇಲೆ ಬೆಟ್ಟದ ಮೇಲಿಂದ ಬಿದ್ದು, ವಿಷ ಕುಡಿದು, ನೇಣು ಹಾಕ್ಕೊಂಡು ಸಾಯೋಕೆ ಹೋಗ್ಬೇಡ ಅದ್ರಿಂದ ಜಸ್ತಿ ಹಣದ ರಿಟರ್ನ್ಸ್ ಸಿಗೊಲ್ಲ ಅದರ ಬದಲು ಅಕಸ್ಮಾತ್ತಾಗಿ ಸತ್ತ ರೀತಿ ಯವುದಾದ್ರು ಲಾರಿ ಕೆಳಗೆ ಬಿದ್ದು ಸಾಯಿ ಅದ್ರಿಂದ ಫುಲ್ ಅಮೌಂಟ್ ಸಿಗುತ್ತೆ” ಅನ್ನಬೇಕೆ? ಅಲ್ಲಿವರೆಗೂ ಸಮಾಧಾನದಿಂದ ಕೇಳ್ತಾ ಇದ್ದ ನನ್ನ ತಾಳ್ಮೆಯ ಕಟ್ಟೆ ಒಡೆದುಹೋಯ್ತು, ಆಫೀಸಿನ ಕಾಫಿಯನ್ನೂ ಅವನಿಗೆ ಕುಡಿಸದೆ “ನೀನೇ ಸಾಯಿ ಮಗ್ನೇ ನಿನ್ನ ಮನೆಯೋರಿಗೇ ಲಕ್ಷಗಟ್ಟಲೆ ದುಡ್ಡು ಸಿಗಲಿ, ನಿನ್ನ ಕಂಪನಿ ಇನ್ಶ್ಯೂರೆನ್ಸ್ ದುಡ್ಡಿಗೋಸ್ಕರ ನಾನು ಸಾಯ್ಬೇಕಾ” ಅಂತ ಬಯ್ದು ಸಿಟ್ಟಿನಿಂದ ಎದ್ದು ನಾನು ಒಳಗೆ ಹೋದುದನ್ನು ಆಫೀಸಿನ ಕೊಲೀಗ್ಸ್ ನೋಡ್ತಾ ನಿಂತಿದ್ರು. ಅವರಿಗೆ ಏನು ಗೊತ್ತಾಗುತ್ತೆ ನನ್ನ ಕಷ್ಟ, ಅವರಿಗೇ ಆಗಲಿ ನೀನು ಸತ್ರೆ, ನಿನ್ನ ಕೈ ಕಾಲು ಮುರಿದ್ರೆ ಅಂತ ಎದುರಿಗೆ ಹೇಳ್ತಾ ಇದ್ರೆ ಮನಸ್ಸಿಗೆ ಎಷ್ಟು ಬೇಜಾರು ಆಗುತ್ತೆ ಅಂತ. ನನ್ನ ಉಗ್ರ ರೂಪವನ್ನು ಮೊದಲ ಬಾರಿ ನೋಡಿದ ನನ್ನ ಸ್ನೇಹಿತ ಯಾವಾಗ ಅಲ್ಲಿಂದ ಕಾಲು ಕಿತ್ತನೋ ಗೊತ್ತಾಗಲಿಲ್ಲ.